ಗುವಾಹಟಿ:ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಬೀದಿಗಿಳಿದಿರುವ ಪ್ರತಿಭಟನಕಾರರು ಅಸ್ಸಾಂನ ಕೈಮಗ್ಗ ಸಚಿವ ರಂಜಿತ್ ದತ್ತಾ ಅವರ ಬೆಹಾಲಿಯಲ್ಲಿರುವ ನಿವಾಸದ ಮೇಲೆಕಲ್ಲು ತೂರಾಟ ನಡೆಸಿದ್ದಾರೆ. ಗುರುವಾರ ಸಂಜೆಸಚಿವರ ಮನೆಗೆ ಮುತ್ತಿಗೆ ಹಾಕಿದ ಪ್ರತಿಭಟನಕಾರರು ಕಲ್ಲು ತೂರಾಟ ಮಾಡಿ ಮನೆಯ ಗಾಜುಗಳನ್ನು ಪುಡಿ ಮಾಡಿದ್ದಾರೆ. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಪ್ರತಿಭಟನಕಾರರನ್ನು ಚದುರಿಸಿದ್ದಾರೆ.
ಆರ್ಟಿಐ ಕಾರ್ಯಕರ್ತ ಬಂಧನ ಆರ್ಟಿಐ ಕಾರ್ಯಕರ್ತ ಅಖಿಲ್ ಗೊಗೊಯಿ ಅವರನ್ನು ಅಸ್ಸಾಂನ ಜೋರತ್ ಜಿಲ್ಲೆಯಿಂದ ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ದಿಬ್ರುಗಡ್ನಲ್ಲಿ ಬಸ್ ನಿಲ್ದಾಣಕ್ಕೆ ಬೆಂಕಿ ದಿಬ್ರುಗಡ್ನಲ್ಲಿರುವ ಅಸ್ಸಾಂ ರಾಜ್ಯ ಸಾರಿಗೆ ಸಂಸ್ಥೆ (ಎಎಸ್ಟಿಸಿ) ನಿಲ್ದಾಣಕ್ಕೆ ಪ್ರತಿಭಟನಕಾರರರು ಬೆಂಕಿ ಹಚ್ಚಿದ್ದಾರೆ. ಚೌಕಿದಿಂಗಿ ಪ್ರದೇಶದಲ್ಲಿ ಬಸ್ ನಿಲ್ದಾಣಕ್ಕೆ ಬಂದ ಪ್ರತಿಭಟನಕಾರರು ಅಲ್ಲಿದ್ದ ವಸ್ತುಗಳನ್ನು ಹಾನಿಗೈದು ಬೆಂಕಿ ಹಚ್ಚಿದ್ದಾರೆ. ಅಗ್ನಿಶಾಮಕ ದಳ ತಕ್ಷಣವೇಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ. ಜಿಲ್ಲಾಡಳಿತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ತೇಜ್ಪುರ್ , ಧೈರೈಜುಲಿಯಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಅಸ್ಸಾಂನ ತೇಜ್ಪುರ್ , ಧೈರೈಜುಲಿಯಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಲಾಗಿದೆ. ಜೋರತ್, ಗೋಲಘಾಟ್, ತಿನ್ಸುಕಿಯಾ , ಚರೈಡೊ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದೆ ಎಂದು ಪಿಟಿಐ ವರದಿ ಮಾಡಿದೆ .
ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನವದೆಹಲಿಯ ಇಂಡಿಯಾ ಗೇಟ್ ಬಳಿ ಪೌರತ್ವ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆದಿದೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು ರಾಷ್ಟ್ರಪತಿಯವರು ಮಸೂದೆಗೆ ಸಹಿ ಹಾಕಬಾರದು ಎಂದು ಒತ್ತಾಯಿಸಿದ್ದಾರೆ.