ರಾಯ್ಪುರ: ಛತ್ತೀಸಗಡದರಾಜನಂದಗಾಂವ್ ಜಿಲ್ಲೆಯಲ್ಲಿ ನಕ್ಸಲರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ನಕ್ಸಲರು ಮತ್ತು ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ಮೃತಪಟ್ಟಿದ್ದಾರೆ.
ರಾಯ್ಪುರದಿಂದ 150 ಕಿ.ಮೀ ದೂರದಲ್ಲಿರುವ ಮನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪರ್ಧೌನಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಇದು ನಡೆದಿದೆ.
ಎನ್ಕೌಂಟರ್ನಲ್ಲಿ ಮೃತಪಟ್ಟವರನ್ನುಮಾವೊವಾದಿ ಪಕ್ಷದ ವಿಭಾಗೀಯ ಸಮಿತಿ ಸದಸ್ಯ ಅಶೋಕ, ಪಕ್ಷದ ಮತ್ತೊಬ್ಬ ಪದಾಧಿಕಾರಿ ಕೃಷ್ಣ, ಪಕ್ಷದ ಕಿರಿಯ ಸದಸ್ಯರಾದ ಸರಿತಾ, ಪ್ರಮೀಳಾ ಎಂದು ಗುರುತಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಶುಕ್ಲಾ ತಿಳಿಸಿದ್ದಾರೆ.
‘ಶುಕ್ರವಾರ ಸಂಜೆ 7 ಗಂಟೆಗೆ ಸುಮಾರು ಏಳೆಂಟು ಸಶಸ್ತ್ರ ನಕ್ಸಲರ ಗುಂಪೊಂದು ಪರ್ಧೌನಿ ಗ್ರಾಮದಲ್ಲಿ ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಸುಳಿವು ಆಧರಿಸಿ ಮದನ್ವಾಡ ಪೊಲೀಸ್ ಠಾಣಾಧಿಕಾರಿ ಶ್ಯಾಮ್ ಕಿಶೋರ್ ಶರ್ಮಾ ಮತ್ತು ಕೊಹ್ಕಾ ಪೊಲೀಸ್ ಠಾಣಾಧಿಕಾರಿ ಪ್ರವೀಣ್ ದ್ವಿವೇದಿ ನೇತೃತ್ವದಲ್ಲಿ 28 ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು. ನಕ್ಸಲರಿದ್ದ ಕಾಡನ್ನು ಸುತ್ತುವರಿದಾಗ ನಕ್ಸಲರು ಪೊಲೀಸರತ್ತ ಗುಂಡಿನ ದಾಳಿ ಆರಂಭಿಸಿದರು. ಇದಕ್ಕೆಪ್ರತಿಯಾಗಿ ಪೊಲೀಸರೂ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಸಬ್ಇನ್ಸ್ಪೆಕ್ಟರ್ ಶ್ಯಾಮ್ಕಿಶೋರ್ ಶರ್ಮಾ ಅವರು ಮೃತಪಟ್ಟಿದ್ದಾರೆ’ ಎಂದು ಶುಕ್ಲಾ ಹೇಳಿದ್ದಾರೆ. ನಕ್ಸಲರು ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಛತ್ತೀಸಗಡ ರಾಜ್ಯಗಳನ್ನು ಸೇರಿಸಿ ರೆಡ್ ಕಾರಿಡಾರ್ ಮಾಡಿಕೊಂಡಿದ್ದು, ಇಲ್ಲಿ ತಮ್ಮ ಕಾರ್ಯಾಚರಣೆ ನಡೆಸುತ್ತಿದ್ದರು. ಈ ನಾಲ್ವರು ನಕ್ಸಲರ ಮೇಲೆ ಸರ್ಕಾರ ನಗದು ಬಹುಮಾನ ಘೋಷಿಸಿತ್ತು.