ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಡ ರಾಜಕಾರಣ: ಯಾರಿಗೆ ಮುಳುವು ಜೋಗಿ ಮೈತ್ರಿಯ ಮಾಯೆ?

Last Updated 22 ಅಕ್ಟೋಬರ್ 2018, 19:15 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಣ ತೀರಾ ನಿಕಟ ಸ್ಪರ್ಧೆಗೆ ಸಾಕ್ಷಿಯಾಗಿದ್ದ ಛತ್ತೀಸಗಡದ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಅವರ ಜನತಾ ಕಾಂಗ್ರೆಸ್‌ ಛತ್ತೀಸಗಡ (ಜೆ) ಪಕ್ಷವು ಹೊಸ ಆಯಾಮವೊಂದನ್ನು ಸೇರಿಸಿದೆ. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಕಾಂಗ್ರೆಸ್‌ಗೆ ಕೈಕೊಟ್ಟು ಜೋಗಿ ಜತೆಗೆ ಕೈಜೋಡಿಸಿರುವುದು ಛತ್ತೀಸಗಡ ಚುನಾವಣಾ ಹೋರಾಟವನ್ನು ಕೌತುಕಮಯವಾಗಿಸಿದೆ.

2000ನೇ ಇಸವಿಯಲ್ಲಿ ಮಧ್ಯಪ‍್ರದೇಶವನ್ನು ವಿಭಜಿಸಿ ಛತ್ತೀಸಗಡ ರಚನೆಯಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆಗ ಕಾಂಗ್ರೆಸ್‌ನಲ್ಲಿದ್ದ ಅಜಿತ್‌ ಜೋಗಿ ಮುಖ್ಯಮಂತ್ರಿಯಾದರು. ಆದರೆ ಅವಧಿ ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗಲಿಲ್ಲ. 2003ರ ವಿಧಾನಸಭಾ ಚುನಾವಣೆಯಲ್ಲಿ ರಮಣ್‌ ಸಿಂಗ್‌ ನಾಯಕತ್ವದಲ್ಲಿ ಬಿಜೆಪಿ ಗೆಲುವು ಸಾಧಿಸಿತು. 90 ಕ್ಷೇತ್ರಗಳನ್ನು ಹೊಂದಿರುವ ವಿಧಾನಸಭೆಯ 50 ಕ್ಷೇತ್ರಗಳನ್ನು ಬಿಜೆಪಿ ಮಡಿಲಿಗೆ ಹಾಕಿಕೊಂಡಿತು. 2008 ಮತ್ತು 2013ರ ಚುನಾವಣೆಗಳಲ್ಲಿಯೂ ಕ್ರಮವಾಗಿ 50 ಮತ್ತು 49 ಕ್ಷೇತ್ರಗಳಲ್ಲಿ ಗೆದ್ದು ರಾಜ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.

ಮರಳಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ಗೆ ಸಾಧ್ಯವಾಗದಿದ್ದರೂ ಗೆದ್ದ ಬಿಜೆಪಿ ಮತ್ತು ಸೋತ ಕಾಂಗ್ರೆಸ್‌ ನಡುವಣ ಮತಗಳ ಅಂತರ ಅತ್ಯಲ್ಪ. 2008ರಲ್ಲಿ ಬಿಜೆಪಿಗೆ ಸಿಕ್ಕಿದ್ದು ಶೇ 41.96ರಷ್ಟು ಮತಗಳಾದರೆ, ಕಾಂಗ್ರೆಸ್‌ ಪಾಲು ಶೇ 40.16ರಷ್ಟು. 2013ರಲ್ಲಿ ಈ ಅಂತರ ಇನ್ನೂ ಕುಗ್ಗಿದೆ. ಬಿಜೆಪಿ ಶೇ 41.06ರಷ್ಟು ಮತ ಪಡೆದರೆ ಕಾಂಗ್ರೆಸ್‌ ಶೇ 40.29ರಷ್ಟು ಮತಗಳನ್ನು ಪಡೆಯಿತು.

ಈ ಅಲ್ಪ ಅಂತರವನ್ನು ಈ ಬಾರಿ ಮೀರಿ ನಿಲ್ಲಬಹುದು ಎಂಬುದು ಕಾಂಗ್ರೆಸ್‌ನ ನಿರೀಕ್ಷೆ. ಅದಕ್ಕೆ ಬೇಕಾದ ಜಾತಿ ಸಮೀಕರಣವನ್ನು ಕಾಂಗ್ರೆಸ್‌ ರೂಪಿಸಿಕೊಂಡಿದೆ. ಪ್ರಬಲ ಹಿಂದುಳಿದ ಸಮುದಾಯವಾದ ಕುರ್ಮಿ ಜಾತಿಯ ಭೂಪೇಶ್‌ ಭಗೆಲ್‌ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಹಿಂದುಳಿದ ವರ್ಗದ ಇನ್ನೊಬ್ಬ ನಾಯಕ ತಾಮ್ರಧ್ವಜ ಸಾಹು ಅವರನ್ನು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಗೆ ನೇಮಿಸುವುದರ ಜತೆಗೆ ಒಬಿಸಿ ಘಟಕದ ಮುಖ್ಯಸ್ಥರನ್ನಾಗಿಯೂ ಮಾಡಲಾಗಿದೆ. ದಲಿತ ಸಮುದಾಯದ ಪಿ.ಎಲ್‌. ಪುನಿಯಾ ಅವರನ್ನು ಪ್ರಧಾನ ಕಾರ್ಯದರ್ಶಿ ಮಾಡಲಾಗಿದ್ದರೆ, ಚಂದನ್‌ ಯಾದವ್‌ ರಾಜ್ಯದ ಉಸ್ತುವಾರಿಯಾಗಿದ್ದಾರೆ.

ಈವರೆಗಿನ ಚುನಾವಣೆಗಳಲ್ಲಿ ದಲಿತ ಸಮುದಾಯದ ಶೇ 65ರಷ್ಟು ಮತಗಳು ಕಾಂಗ್ರೆಸ್‌ ಪಕ್ಷಕ್ಕೆ ಬೀಳುತ್ತಿದ್ದವು. ಒಬಿಸಿ ಮತ್ತು ಮೇಲ್ಜಾತಿ ಜನರ ಶೇ 70ರಷ್ಟು ಮತಗಳು ಬಿಜೆಪಿಗೆ ಬೀಳುತ್ತಿದ್ದವು ಎಂಬುದು ಒಂದು ಲೆಕ್ಕಾಚಾರ. ಈಗ ಹಿಂದುಳಿದ ವರ್ಗಗಳ ಮತಗಳನ್ನು ಆಕರ್ಷಿಸುವುದು ಕಾಂಗ್ರೆಸ್‌ನ ಕಾರ್ಯತಂತ್ರ.

ಆದರೆ ದಲಿತ ಸಮುದಾಯದ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ರಾಮದಯಾಳ್‌ ಉಯ್ಕೆ ಮೊನ್ನೆಮೊನ್ನೆವರೆಗೆ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿದ್ದರು. ಆದರೆ ಅವರು ಈಗ ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್‌ನಲ್ಲಿಯೇ ಇದ್ದ ಅಜಿತ್‌ ಜೋಗಿ ಅವರು ಬೇರೆ ಪಕ್ಷ ಮಾಡಿ, ದಲಿತ ಸಮುದಾಯದ ಅತಿ ದೊಡ್ಡ ನಾಯಕಿ ಎಂದು ಪರಿಗಣಿಸಬಹುದಾದ ಮಾಯಾವತಿ ಅವರ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ಎರಡು ಹೊಡೆತಗಳನ್ನು ತಾಳಿಕೊಳ್ಳುವುದು ಕಾಂಗ್ರೆಸ್‌ಗೆ ಸುಲಭವಲ್ಲ.

ಹದಿನೈದು ವರ್ಷಗಳ ಆಡಳಿತದ ಬಳಿಕ ಬಿಜೆಪಿ ಆಡಳಿತ ವಿರೋಧಿ ಅಲೆ ಎದುರಿಸಬೇಕಾಗಿರುವುದು ಸಹಜವೇ. ಆದರೆ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರಷ್ಟು ಜನಪ್ರಿಯತೆ ಇರುವ ನಾಯಕರು ಬೇರೆ ಪಕ್ಷಗಳಲ್ಲಿ ಇಲ್ಲ. ಪಡಿತರ ವಿತರಣೆ ವ್ಯವಸ್ಥೆಯೇ ತಮ್ಮ ಅತಿ ದೊ‌ಡ್ಡ ಸಾಧನೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ. ಶೇ 47.9ರಷ್ಟು ಜನರು ಬಡತನ ರೇಖೆಗಿಂತ ಕೆಳಗೆ ಇದ್ದಾರೆ ಎಂದು ರಂಗರಾಜನ್‌ ಸಮಿತಿ ವರದಿ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕ ವಿತರಣೆ ವ್ಯವಸ್ಥೆಯನ್ನು ದಕ್ಷವಾಗಿಸುವುದು ಬಹಳ ಮುಖ್ಯವಾದ ಕೆಲಸವೇ ಹೌದು.

ಈ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿ ರಮಣ್‌ ಸಿಂಗ್‌ ಅವರ ಮಗ ಅಭಿಷೇಕ್‌ ಹೆಸರು ಕೇಳಿಬಂದಿದೆ. ಪನಾಮಾ ದಾಖಲೆ ಸೋರಿಕೆಯಲ್ಲಿಯೂ ಅಭಿಷೇಕ್‌ ಹೆಸರು ಇದೆ ಎಂಬುದು ಇನ್ನೊಂದು ಆರೋಪ. ಮೂರು ಅವಧಿಯ ಆಡಳಿತ ವಿರೋಧಿ ಅಲೆಯ ಜತೆಗೆ ಭ್ರಷ್ಟಾಚಾರ ಆರೋಪವನ್ನೂ ರಮಣ್‌ ಸಿಂಗ್‌ ಎದುರಿಸಬೇಕಾಗಿದೆ.

ಜೋಗಿ–ಮಾಯಾವತಿ ಜೋಡಿಯು ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಯಾವ ಪಕ್ಷದ ಮತಕ್ಕೆ ಕನ್ನ ಹಾಕಲಿದೆ ಎಂಬುದು ಈಗ ಮುಖ್ಯವಾಗಿರುವ ಪ್ರಶ್ನೆ. ಈ ಜೋಡಿಯಿಂದ ಕಾಂಗ್ರೆಸ್‌ಗೆ ತೊಂದರೆ ಹೆಚ್ಚು ಎಂಬ ಭಾವನೆ ಆರಂಭದಲ್ಲಿ ಇತ್ತಾದರೂ ಅದು ಅಷ್ಟು ಸರಳವಾದ ವಿಚಾರ ಅಲ್ಲ. ರಾಜ್ಯದಲ್ಲಿ ಒಟ್ಟು 10 ಕ್ಷೇತ್ರಗಳು ದಲಿತರಿಗೆ ಮೀಸಲಾಗಿವೆ. ಕಳೆದ ಚುನಾವಣೆಯಲ್ಲಿ ಈ ಹತ್ತರಲ್ಲಿ ಒಂಬತ್ತು ಕ್ಷೇತ್ರಗಳು ಬಿಜೆಪಿಗೆ ಸಿಕ್ಕಿವೆ. ಜೋಗಿ ಅವರು ಕಣ್ಣಿಟ್ಟಿರುವುದು ಈ ಕ್ಷೇತ್ರಗಳ ಮೇಲೆಯೇ. ಈ ಕ್ಷೇತ್ರಗಳಲ್ಲಿ ಗೆಲ್ಲಲು ಅವರು ಯಶಸ್ವಿಯಾದರೆ ಅದರ ಹೊಡೆತ ಬಿಜೆಪಿಗೆ. ಕಳೆದ ಬಾರಿ ಈ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನಲ್ಲಿ ಜೋಗಿ ಪಾತ್ರ ಇತ್ತು.

ನಕ್ಸಲ್‌ಪೀಡಿತ ಬಸ್ತಾರ್‌ನ 12 ಕ್ಷೇತ್ರಗಳ ಪೈಕಿ ಎಂಟರಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಬಸ್ತಾರ್‌ನಲ್ಲಿಯೇ ರ‍್ಯಾಲಿ ಮಾಡಿದ್ದಾರೆ. ತಮ್ಮ ಎರಡೂ ಯಾತ್ರೆಗಳನ್ನು ರಮಣ್‌ ಸಿಂಗ್‌ ಅವರು ಬಸ್ತಾರ್‌ ವಿಭಾಗದಿಂದಲೇ ಆರಂಭಿಸಿದ್ದಾರೆ. ರಾಯಪುರ ವಿಭಾಗದ 20 ಕ್ಷೇತ್ರಗಳಲ್ಲಿ 15 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಈ ಭಾಗದಲ್ಲಿ ಪ್ರಭಾವ ಗಾಢಗೊಳಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನಿಕಟ ಸ್ಪರ್ಧೆ ಇರುವುದರಿಂದ ಯಾವ ಪಕ್ಷಕ್ಕೂ ಬಹುಮತ ಬಾರದೇ ಇದ್ದರೆ, ಕೆಲವು ಸ್ಥಾನಗಳನ್ನಾದರೂ ಗೆಲ್ಲಬಹುದಾದ ಜೋಗಿ ಅವರು ಕಿಂಗ್‌ ಮೇಕರ್‌ ಆಗುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT