ಹೊಳಲ್ಕೆರೆ: ‘ನಾಮಪತ್ರ ಸಲ್ಲಿಸಿದ ದಿನವೇ ನನ್ನ ಸೋಲು ಖಚಿತವಾಗಿತ್ತು. ಹೀಗಿದ್ದರೂ ಚುನಾವಣೆ ಎದುರಿಸುವ ಉದ್ದೇಶದಿಂದ ಸ್ಪರ್ಧಿಸಿದೆ’ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ಪಟ್ಟಣದ ಒಂಟಿಕಂಬದ ಮಠದ ಆವರಣದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಇಲ್ಲಿನ ಜನ ಮೂರು ವರ್ಷಗಳಿಂದ ಕಾದು ಕುಳಿತು ನನ್ನನ್ನು ಸೋಲಿಸಿದ್ದಾರೆ. ಅಭಿವೃದ್ಧಿ ಮಾಡಿದ ಬಿ.ಜಿ. ಗೋವಿಂದಪ್ಪ, ಟಿ.ಬಿ. ಜಯಚಂದ್ರ ಅವರನ್ನೇ ಜನ ಸೋಲಿಸಿದ್ದಾರೆ’ ಎಂದರು.
‘ಬಿಜೆಪಿ ಕಾರ್ಯಕರ್ತರು ನನ್ನ ವಿರುದ್ಧ ನಡೆಸಿದ ವ್ಯವಸ್ಥಿತ ಅಪಪ್ರಚಾರದಿಂದ ನಾನು ಸೋಲಬೇಕಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.
‘ಬಿಜೆಪಿಯವರು ಬಹುಮತ ಇಲ್ಲದಿದ್ದರೂ, ಸರ್ಕಾರ ರಚಿಸಿದ್ದಾರೆ. ಇದರ ವಿರುದ್ಧ ಜನರೇ ದಂಗೆ ಏಳಬೇಕು. ಯಡಿಯೂರಪ್ಪ ಅವರು ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಮುಖ್ಯಮಂತ್ರಿ ಆಗಿದ್ದಾರೆ. ಬಹುಮತ ಇಲ್ಲದ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.