ರಾಯಪುರ:ಛತ್ತೀಸಗಡದ ನೂತನ ಮುಖ್ಯಮಂತ್ರಿ ಆಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಭೂಪೇಶ್ ಬಘೆಲ್ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ. ಬಘೆಲ್ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಶಾಸಕಾಂಗಪಕ್ಷದ ಸಭೆ ನಡೆಯುತ್ತಿರುವಂತೆಯೇ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರ ಘೋಷಣೆ ಮಾಡಲಾಗಿದೆ. ‘ರಾಜ್ಯದ ನೂತನ ಸರ್ಕಾವು ಸಮಾನತೆ, ಪಾರ್ದರ್ಶಕತೆ ಮತ್ತು ಸಮಗ್ರವಾಗಿ ಕಾರ್ಯನಿರ್ವಹಿಸಲಿದೆ. ರೈತರಿಗೆ ಭರವಸೆ ನೀಡಿರುವಂತೆಯೇ ಸಾಲಮನ್ನಾ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದು ಸರ್ಕಾರದ ಮೊದಲ ಕೆಲಸವಾಗಿರಲಿದೆ’ ಎಂದು ಟ್ವಿಟರ್ನಲ್ಲಿ ಉಲ್ಲೇಖಿಸಲಾಗಿದೆ.
ಛತ್ತೀಸಗಡದ ಕಾಂಗ್ರೆಸ್ ನಾಯಕರಾದ ಟಿ.ಎಸ್. ಸಿಂಹದೇವ್, ಭೂಪೇಶ್ ಬಘೆಲ್, ತಾಮ್ರಧ್ವಜ ಸಾಹು ಹಾಗೂ ಚರಣ್ ದಾಸ್ ಮಹಾಂತ್ ಅವರು ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿದ್ದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಛತ್ತೀಸಗಡ ಮುಖ್ಯಮಂತ್ರಿ ಆಯ್ಕೆಗೆ ಶನಿವಾರ ಸರಣಿ ಸಭೆಗಳನ್ನು ನಡೆಸಿದ್ದರು.ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಛತ್ತೀಸಗಡದ ಚುನಾವಣಾ ವೀಕ್ಷಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ನಾಲ್ವರೂ ಆಕಾಂಕ್ಷಿಗಳ ಜೊತೆ ಇರುವ ಚಿತ್ರವನ್ನು ಟ್ವೀಟ್ ಮಾಡಿದ್ದ ರಾಹುಲ್, ಮುಖ್ಯಮಂತ್ರಿ ಆಯ್ಕೆ ಗೊಂದಲ ಬಗೆಹರಿದಿದೆ ಎಂಬ ಸುಳಿವು ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.