ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಅಪಹಾಸ್ಯಕ್ಕೆ ಗುರಿಯಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
‘ಗಾಂಧಿ ಕುಟುಂಬದ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಮಿಷೆಲ್ ಮೇಲೆ ಕೇಂದ್ರ ಸರ್ಕಾರ ಒತ್ತಡ ಹಾಕುತ್ತಿದೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹೊಸ ನ್ಯಾಯದಾನ ವ್ಯವಸ್ಥೆ: ಯಾವುದೇ ಸಾಕ್ಷ್ಯಗಳಿಲ್ಲದೇ, ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡುವ ಹೊಸ ನ್ಯಾಯದಾನ ವ್ಯವಸ್ಥೆಯನ್ನು ಜಾರಿ ನಿರ್ದೇಶನಾಲಯ ಮತ್ತು ಮಾಧ್ಯಮಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿದೆ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಟೀಕಿಸಿದ್ದಾರೆ.
‘ಇ.ಡಿ ಮೌಖಿಕ ಸಾಕ್ಷಿ ಹೇಳಿದೆ, ಯಾವುದೇ ದಾಖಲೆ ನೀಡಿಲ್ಲ. ಟಿ.ವಿ ಚಾನಲ್ ಪ್ರಕರಣದ ವಿಚಾರಣೆ ನಡೆಸಿ, ತೀರ್ಪು ನೀಡುತ್ತಿದೆ’ ಎಂದು ಅವರು ಸರಣಿ ಟ್ವೀಟ್ ಮೂಲಕ ಲೇವಡಿ ಮಾಡಿದ್ದಾರೆ.
ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮಿಷೆಲ್ ಅವರುವಿಚಾರಣೆ ಸಂದರ್ಭದಲ್ಲಿ ‘ಮಿಸೆಸ್ ಗಾಂಧಿ’ ಮತ್ತು ‘ಇಟಲಿ ಮಹಿಳೆಯ ಪುತ್ರ’ನ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಇ.ಡಿ ದೆಹಲಿ ಕೋರ್ಟ್ಗೆ ಮಾಹಿತಿ ನೀಡಿದ್ದಕ್ಕೆ ಚಿದಂಬರಂ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
‘ಮಸಿ ಬಳಿಯುವ ಕೆಲಸ’
ನವದೆಹಲಿ: ಒಂದು ನಿರ್ದಿಷ್ಟ ಕುಟುಂಬದ ವಿರುದ್ಧ ನಿರಂತರ ಹೇಳಿಕೆ ನೀಡುವುದು ಮತ್ತು ಸ್ವಾತಂತ್ರ್ಯ ನಂತರ ದೇಶ ಅಭಿವೃದ್ಧಿ ಕಂಡಿಲ್ಲ ಎಂದು ಬಿಂಬಿಸುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಏಕೈಕ ಕಾರ್ಯಸೂಚಿ ಎಂದು ಲೋಕತಾಂತ್ರಿಕ ಜನತಾ ದಳದ ಮುಖ್ಯಸ್ಥ ಶರದ್ ಯಾದವ್ ಹೇಳಿದ್ದಾರೆ.
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕ್ಷುಲ್ಲಕ ರಾಜಕಾರಣದಲ್ಲಿ ತೊಡಗಿಸಿಕೊಂಡಿದೆ. ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಹಗರಣ ಮತ್ತು ಇತರೆ ವಿಷಯಗಳಿಂದ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಮಿಷೆಲ್ ಪ್ರಕರಣ ಕೈಗೆತ್ತಿಕೊಂಡಿದೆ’ ಎಂದು ಆರೋಪಿಸಿದರು.
ತನಿಖಾ ಸಂಸ್ಥೆಗಳ ದುರ್ಬಳಕೆ:ಎನ್ಸಿಪಿ
ಅಹಮ್ಮದನಗರ: ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದನ್ನು ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಪ್ರಶ್ನಿಸಲಿವೆ ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದರು.
‘ಅಧಿವೇಶನ ಸೋಮವಾರ ಮತ್ತೆ ಆಂಭವಾಗಲಿದ್ದು, ಈ ವಿಷಯ ಕುರಿತು ಎಲ್ಲ ವಿರೋಧ ಪಕ್ಷಗಳೊಂದಿಗೆ ಚರ್ಚಿಸುತ್ತೇನೆ. ಸಿಬಿಐ, ಇ.ಡಿ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ದುರ್ಬಳಕೆ ವಿರುದ್ಧ ಹೋರಾಟ ನಡೆಸುತ್ತೇವೆ’ ಎಂದರು.