ಸೀತಾಮಡಿ, ಬಿಹಾರ: ಶಬರಿಮಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಟೀಕಿಸಿದ್ದಾರೆ ಎಂಬ ಆರೋಪದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಇಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಠಾಕೂರ್ ಚಂದನ್ ಸಿಂಗ್ ಎಂಬುವರು ದೂರು ದಾಖಲಿಸಿದ್ದು, ನವೆಂಬರ್ 6ರಂದು ಅದು ವಿಚಾರಣೆಗೆ ಬರಲಿದೆ. ಶಾ ವಿರುದ್ಧ ದೇಶದ್ರೋಹ (ಸೆಕ್ಷನ್ 124 ಎ), ಕ್ರಿಮಿನಲ್ ಸಂಚು (120ಬಿ) ಪ್ರಕರಣಗಳನ್ನು ದಾಖಲಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
‘ಶಬರಿಮಲೆ ತೀರ್ಪು ಜನರ ಭಾವನೆಗಳನ್ನು ಘಾಸಿಗೊಳಿಸಿದೆ. ಅಲ್ಲದೆ ಇದು ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ದಾಳಿ’ ಎಂಬುದಾಗಿ ಅಮಿತ್ ಶಾ ಹೇಳಿದ್ದಾರೆ ಎನ್ನಲಾದ ಪತ್ರಿಕಾ ವರದಿಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.