ಅಹಮದಾಬಾದ್ : ವಿಚಾರಣಾ ನ್ಯಾಯಾಲಯದ ಎದುರು ಹಾಜರಾಗಲು ವಿಫಲವಾಗಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ಗೆ ನಾಲ್ಕು ದಿನಗಳ ಬಳಿಕ ಬುಧವಾರ ಜಾಮೀನು ದೊರೆತಿದೆ.
ನ್ಯಾಯಾಲಯದ ವಿಚಾರಣೆಗೆ ಸಹಕರಿಸಬೇಕು ಹಾಗೂ ನಂಬಲರ್ಹವಾದ ಕಾರಣದ ಹೊರತಾಗಿ ವಿಚಾರಣೆ ಮುಂದೂಡಲು ಕೋರಬಾರದು ಎನ್ನುವ ಷರತ್ತಿನ ಮೇಲೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ.ಜಿ. ಗನಾತ್ರ ಅವರು ಜಾಮೀನು ಮಂಜೂರು ಮಾಡಿದರು.
ಮುಂದಿನ ವಿಚಾರಣೆ ಇದೇ 24ಕ್ಕೆ ನಿಗದಿಯಾಗಿದೆ.
ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ 2015ರಲ್ಲಿ ಹಾರ್ದಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಈ ವೇಳೆ ಗುಜರಾತ್ನ ಹಲವೆಡೆ ಗಲಭೆ ಉಂಟಾಗಿ, ಹಾರ್ದಿಕ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು.