ರಾಯಪುರ(ಪಿಟಿಐ): ‘ಅಮ್ಮಾ ಐ ಲವ್ ಯು. ನಾನು ಈ ದಾಳಿಯಲ್ಲಿ ಸಾಯಬಹುದು’ ಇದು ದಾಂತೇವಾಡದಲ್ಲಿ ನಕ್ಸಲರು ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ದೂರದರ್ಶನ ವಾಹಿನಿ ಸಿಬ್ಬಂದಿ ಮೊರ್ಮುಕುಟ್ ಶರ್ಮಾ ತನ್ನ ತಾಯಿಗೆ ಕಳುಹಿಸಿರುವ ಸಂದೇಶ.
‘ವಿಧಾನಸಭಾ ಚುನಾವಣೆಯ ವರದಿಗಾರಿಕೆಗೆ ಪೊಲೀಸ್ ಬೆಂಗಾವಲಿನಲ್ಲಿ ತೆರಳುತ್ತಿದ್ದಾಗ ನಮ್ಮ ಮೇಲೆ ದಾಳಿ ನಡೆದಿದೆ’ ಎಂದು ಶರ್ಮಾ ಅವರು ನೆಲದಲ್ಲಿ ಮಲಗಿಕೊಂಡು ಚಿತ್ರೀಕರಿಸಿರುವ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ದೂರದರ್ಶನ ಸುದ್ದಿ ವಾಹಿನಿಯಲ್ಲಿ ಲೈಟಿಂಗ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿರುವ ಮೊರ್ಮುಕುಟ್ ಹಾಗೂ ಪತ್ರಕರ್ತ ಧೀರಜ್ ಕುಮಾರ್ ಈ ದಾಳಿಯಿಂದ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಆದರೆ ಕ್ಯಾಮೆರಾಮನ್ ನಕ್ಸಲರ ಗುಂಡಿಗೆ ಬಲಿಯಾಗಿದ್ದಾರೆ.
ಚುನಾವಣಾ ವರದಿಗಾರಿಕೆಗಾಗಿ ಇವರು ದೆಹಲಿಯಿಂದ ಛತ್ತೀಸಗಡಕ್ಕೆ ತೆರಳಿದ್ದರು.
ಛತ್ತೀಸಗಡದಲ್ಲಿ ನಕ್ಸಲ್ ದಾಳಿ: ಗಾಯಾಳು ಪೊಲೀಸ್ ಸಾವು
ರಾಯಪುರ, ಛತ್ತೀಸಗಡ (ಪಿಟಿಐ): ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ಪೊಲೀಸರೊಬ್ಬರು ಬುಧವಾರ ಮೃತಪಟ್ಟಿದ್ದು, ಮೃತರ ಸಂಖ್ಯೆ ನಾಲ್ಕಕ್ಕೇರಿದೆ.
ಅರಾನ್ಪುರ ಪೊಲೀಸ್ ಠಾಣೆಯ ಸಹಾಯಕ ಕಾನ್ಸ್ಟೆಬಲ್ ರಾಕೇಶ್ ಕೌಶಲ್ (35) ಮೃತಪಟ್ಟವರು.
ನಿಲ್ವಾಯ ಗ್ರಾಮದಲ್ಲಿ ನಕ್ಸಲರು ಮಂಗಳವಾರ ನಡೆಸಿದ ದಾಳಿಗೆ ಸಬ್ ಇನ್ಸ್ಪೆಕ್ಟರ್ ರುದ್ರ ಪ್ರತಾಪ್ ಸಿಂಗ್, ಸಹಾಯಕ ಕಾನ್ಸ್ಟೆಬಲ್ ಮಾಂಗ್ಲು ಮತ್ತು ದೂರದರ್ಶನ ವಾಹಿನಿಯ ಕ್ಯಾಮೆರಾಮನ್ ಅಚ್ಯುತಾನಂದ್ ಸಾಹು ಬಲಿಯಾಗಿದ್ದರು.
ರಾಕೇಶ್ ಸೇರಿದಂತೆ ಗಾಯಗೊಂಡಿದ್ದ ಇಬ್ಬರು ಪೊಲೀಸರನ್ನು ಹೆಲಿಕಾಪ್ಟರ್ ಮೂಲಕ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು.