ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಮುಖ್ಯವಾಗಿ, ನಿಷ್ಠಾವಂತರು ಬೇಡವಾದರೆ?

ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ವರಿಷ್ಠರ ವಿರುದ್ಧ ಸಂಪಂಗಿ ವಾಗ್ದಾಳಿ
Last Updated 17 ಏಪ್ರಿಲ್ 2018, 6:27 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಬಾಗೇಪಲ್ಲಿ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿದವರಿಗೆ (ಎಸ್.ಎನ್.ಸುಬ್ಬಾರೆಡ್ಡಿ) ಇವತ್ತು ಮಣೆ ಹಾಕಿ ಟಿಕೆಟ್ ನೀಡಲಾಗಿದೆ. ಇದರಿಂದ ನನಗೆ ಅನ್ಯಾಯವಾಗಿದೆ. ವರಿಷ್ಠರಿಗೆ ಹಣ ಮುಖ್ಯವಾಗಿದ್ದು, ನಿಷ್ಠಾವಂತರು ಬೇಡವಾಯಿತೆ?’ ಎಂದು ಮಾಜಿ ಶಾಸಕ ಎನ್.ಸಂಪಂಗಿ ಖಾರವಾಗಿ ಪ್ರಶ್ನಿಸಿದರು.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಪಂಗಿ ಅವರು ಟಿಕೆಟ್ ಕೈತಪ್ಪಿದ್ದಕ್ಕೆ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕಾಂಗ್ರೆಸ್ ವರಿಷ್ಠರು ಮತ್ತು ಸಂಸದ ವೀರಪ್ಪ ಮೊಯಿಲಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘1998ರಲ್ಲಿ ಸಿಪಿಎಂ ವಿರುದ್ಧ ಗೆದ್ದ ಬಳಿಕ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು ತಾಲ್ಲೂಕು ಪಂಚಾಯಿತಿ ವರೆಗೆ ಕಾಂಗ್ರೆಸ್ ಕಟ್ಟಿಕೊಂಡು ಬಂದೆವು. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜತೆ ಕೆಲಸ ಮಾಡಿದವರು ನಾವು. ಕೆಳ ಹಂತದಿಂದ ಕೆಲಸ ಮಾಡುತ್ತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕೂಡ ಕೆಲಸ ಮಾಡಿರುವೆ’ ಎಂದು ಹೇಳಿದರು.

‘ಮಂಗಳೂರಿನಲ್ಲಿ ಮೂರು ಬಾರಿ ಸೋತಿದ್ದ ವೀರಪ್ಪ ಮೊಯಿಲಿ ಅವರು 2009ರಲ್ಲಿ ಈ ಭಾಗದಿಂದ ಲೋಕಸಭೆ ಚುನಾವಣೆ ಸ್ಪರ್ಧಿಸುವುದಾಗಿ ನನ್ನನ್ನು ಕೇಳಿಕೊಂಡಾಗ ಕಾಂಗ್ರೆಸ್ ಉಳಿಸಬೇಕು ಎನ್ನುವ ಕಾರಣಕ್ಕೆ ಅವರಿಗೆ ಸಹಕಾರ ನೀಡಿದೆವು. ಆಗ ಅನೇಕ ಸ್ಥಳೀಯ ಮುಖಂಡರು ಮೊಯಿಲಿ ಅವರಿಗೆ ವಿರುದ್ಧವಾಗಿದ್ದರು. ಆದರೂ ನಾವು ಮೊಯಿಲಿ ಅವರಿಗಾಗಿ ದುಡಿದು, ಕ್ಷೇತ್ರದಲ್ಲಿ ಅವರಿಗೆ 26 ಸಾವಿರ ಮತ ಕೊಟ್ಟೆವು’ ಎಂದು ತಿಳಿಸಿದರು.

‘ಇಲ್ಲಿಂದ ಲೋಕಸಭೆಗೆ ಆಯ್ಕೆಯಾದ ಮೊಯಿಲಿ ಅವರು ಕೇಂದ್ರದಲ್ಲಿ ಸಚಿವರಾದರು. ಆ ವೇಳೆ ಅವರೇ 14 ವರ್ಷ ಅಜ್ಞಾತವಾಸದಲ್ಲಿ ಇದ್ದವನನ್ನು ಕರೆದುಕೊಂಡು ಸಂಪಂಗಿ ರಾಜಕೀಯ ಪುರ್ನಜನ್ಮ ಕೊಟ್ಟರು ಎಂದು ಹೇಳಿಕೊಂಡಿದ್ದರು. ಇವತ್ತು ಅವರು ಏನು ಕೆಲಸ ಮಾಡಿದ್ದಾರೆ? ನಾವು ಇಲ್ಲದಿದ್ದರೆ ಮೊಯಿಲಿ ಅವರು ಇಲ್ಲಿ ಬಂದು ಲೋಕಸಭೆ ಸದಸ್ಯರಾಗುತ್ತಿದ್ದರೆ? ಬಹಳ ನೋವಾಗು ತ್ತಿದೆ’ ಎಂದು ಬೇಸರ ಹೊರಹಾಕಿದರು.

‘ಈವರೆಗೆ ಮೊಯಿಲಿ ಅವರಿಗೆ ತೊಂದರೆಯಾಗದಂತೆ ನಡೆದುಕೊಂಡಿ ರುವೆ. ಅವರಿಗೆ ಏನು ಅನ್ಯಾಯ ಮಾಡಿರುವೆ? ನನ್ನ ಮೇಲೆ ಭ್ರಷ್ಟಾಚಾರದ ಆರೋಪಗಳೆನಾದರೂ ಇವೆಯಾ? ನಮ್ಮಂತಹ ನಿಷ್ಠಾವಂತ ಕಾಂಗ್ರೆಸಿಗರನ್ನು ಬಾವಿಗೆ ದೂಡುವ ಕೆಲಸ ಮಾಡಬಾರದು. ಏಕೆಂದರೆ ನಮ್ಮನ್ನೇ ನಂಬಿರುವವರು ಬಹಳಷ್ಟು ಜನರಿದ್ದಾರೆ’ ಎಂದು ಹೇಳಿದರು.

‘ನಾನು ಹಣಕ್ಕಾಗಿ ಆಸೆ ಪಟ್ಟಿದ್ದರೆ ಹಣ ಬಹಳಷ್ಟು ಸಿಗುತ್ತಿತ್ತು. ಹಿಂದೆ ಬಿಜೆಪಿಯವರು ಅನೇಕ ಆಮಿಷಗಳನ್ನು ತೋರಿಸಿದರೂ ನಾನು ಪಕ್ಷ ಬಿಡಲಿಲ್ಲ. ಅಧಿಕಾರಕ್ಕಾಗಿ ಆಸೆ ಪಟ್ಟಿಲ್ಲ. ಜನಸೇವೆ ಮಾಡುವುದೊಂದೆ ನನ್ನ ಗುರಿ. ಈ ಹಿಂದೆ ನಾನು ಶಾಸಕನಾಗಿದ್ದಾಗ ₹ 1,500 ಕೋಟಿ ಅನುದಾನ ತಂದು ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿರುವೆ. ಮೊಯಿಲಿ ಅವರಿಗೆ ದೇವರ ಮೇಲೆ ಭಕ್ತಿ ಇದ್ದರೆ ನನಗೆ ಏಕೆ ಅನ್ಯಾಯ ಮಾಡಿದರು ಹೇಳಲಿ’ ಎಂದು ಪ್ರಶ್ನಿಸಿದರು.

‘1999ರಲ್ಲಿ ಕೂಡ ಜಾಲಪ್ಪ ಅವರು ನನಗೆ ಟಿಕೆಟ್ ತಪ್ಪಿಸಲು ಪ್ರಯತ್ನಿಸಿದರು. ಆದರೆ ಆಗ ಕಾರ್ಯಕರ್ತರು ನನ್ನ ಕೈಬಿಡಲಿಲ್ಲ. ಈ ಬಾರಿ ಕೂಡ ಟಿಕೆಟ್ ನೀಡದಿದ್ದರೆ ಅದೇ ಸ್ಥಿತಿ ಉದ್ಭವಿಸುತ್ತದೆ’ ಎಂದು ಸಂಪಂಗಿ ಹೇಳಿದರು. ಈ ವೇಳೆ ಸಂಪಂಗಿ ಬೆಂಬಲಿಗರು ವೀರಪ್ಪ ಮೊಯಿಲಿ ವಿರುದ್ಧ ಧಿಕ್ಕಾರ ಕೂಗಿದರು.

**

ವರಿಷ್ಠರು ಪಕ್ಷಕ್ಕಾಗಿ ದುಡಿದವರ ಬಗ್ಗೆ ಹೈಕಮಾಂಡ್ ಗಮನಕ್ಕೆ ತರದೆ, ದೊಡ್ಡ ಮಟ್ಟದಲ್ಲಿ ವ್ಯಾಪಾರ ಮಾಡಿಕೊಂಡು ಕಾಂಗ್ರೆಸ್ ಕಟ್ಟುವ ಕೆಲಸ ಮಾಡಲು ಹೊರಟಿದ್ದಾರೆ – ಎನ್.ಸಂಪಂಗಿ, ಮಾಜಿ ಶಾಸಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT