ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಸಿಲುಕಿರುವವರಿಗಾಗಿ ಭಾರತೀಯ ರೈಲ್ವೆ ವಿಶೇಷ ರೈಲುಗಳ ಸಂಚಾರ ನಡೆಸುತ್ತಿದ್ದು, ಸುಮಾರು 80,000 ಪ್ರಯಾಣಿಕರು ಒಟ್ಟು ₹16 ಕೋಟಿ ಮೌಲ್ಯದ ಟಿಕೆಟ್ಗಳನ್ನು ಬುಕ್ ಮಾಡಿದ್ದಾರೆ.
ಸೋಮವಾರ ಸಂಜೆ 6ರಿಂದ ವಿಶೇಷ ರೈಲುಗಳ ಚಿಕೆಟ್ ಬುಕ್ಕಿಂಗ್ ಅವಕಾಶ ಕಲ್ಪಿಸಲಾಗಿದೆ. ನವದೆಹಲಿ ರೈಲ್ವೆ ನಿಲ್ದಾಣದಿಂದ ಇಂದು ಮೊದಲ ವಿಶೇಷ ರೈಲು ಮಧ್ಯ ಪ್ರದೇಶದ ಬಿಲಾಸ್ಪುರಕ್ಕೆ ಹೊರಡಲಿದೆ.
ಮುಂದಿನ ಏಳು ದಿನಗಳ ವರೆಗಿನ ವಿಶೇಷ ರೈಲುಗಳಿಗೆ ₹16.15 ಕೋಟಿ ಮೌಲ್ಯದ 45,533 ಬುಕ್ಕಿಂಗ್ಗಳು (ಪಿಎನ್ಆರ್) ದಾಖಲಾಗಿವೆ. ಈ ಬುಕ್ಕಿಂಗಳ ಮೂಲಕ 82,317 ಪ್ರಯಾಣಿಕರು ಪ್ರಯಾಣ ಬೆಳೆಸಲಿದ್ದಾರೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಭಾರತೀಯ ರೈಲ್ವೆ ಸೋಮವಾರ 15 ವಿಶೇಷ ರೈಲುಗಳ ಸಂಚಾರಕ್ಕೆ ಮಾರ್ಗಸೂಚಿ ಹೊರಡಿಸಿದೆ. ಪ್ರಯಾಣಿಕರೇ ಊಟ–ತಿಂಡಿ ಹಾಗೂ ಹೊದಿಕೆ ತೆಗೆದುಕೊಂಡು ಬರುವಂತೆ ಸೂಚಿಸಲಾಗಿದೆ. ರೈಲು ಹೊರಡುವ ಸಮಯಕ್ಕಿಂತ ಕನಿಷ್ಠ 90 ನಿಮಿಷ ಮುಂಚಿತವಾಗಿ ರೈಲ್ವೆ ನಿಲ್ದಾಣ ತಲುಪುವಂತೆ ತಿಳಿಸಲಾಗಿದೆ.
ಪ್ರಯಾಣಿಕರು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಷನ್ ಇನ್ಸ್ಟಾಲ್ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
ಮಂಗಳವಾರ ಭಾರತೀಯ ರೈಲ್ವೆಯ 8 ರೈಲುಗಳು ಸಂಚರಿಸುತ್ತಿವೆ. ನವದೆಹಲಿಯಿಂದ ಮೂರು ರೈಲುಗಳು ಬೆಂಗಳೂರು, ಬಿಲಾಸ್ಪುರ್ ಹಾಗೂ ಡಿಬ್ರುಗಢ ತಲುಪಲಿವೆ. ಬೆಂಗಳೂರು, ಹೌರಾ, ರಾಜೇಂದ್ರ ನಗರ್ (ಪಟ್ನಾ), ಮುಂಬೈ ಸೆಂಟ್ರಲ್ ಹಾಗೂ ಅಹಮದಾಬಾದ್ನಿಂದ ತಲಾ ಒಂದು ರೈಲು ದೆಹಲಿ ತಲುಪಲಿದೆ. ಈ ಎಲ್ಲ ವಿಶೇಷ ರೈಲುಗಳು ಎಸಿ ಕೋಚ್ಗಳನ್ನು ಮಾತ್ರ ಹೊಂದಿವೆ.
ಲಾಕ್ಡೌನ್ ಅವಧಿಯಲ್ಲಿ ರೈಲುಗಳು ಸಂಚರಿಸುತ್ತಿರುವುದರಿಂದ ಇ–ಟಿಕೆಟ್ ಖಚಿತಗೊಂಡಿರುವವರಿಗೆ ಮಾತ್ರ ನಿಲ್ದಾಣಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಪ್ರಯಾಣಿಕರು ಮುಂದಿನ ಏಳು ದಿನಗಳ ವರೆಗಿನ ರೈಲುಗಳಲ್ಲಿ ಸಂಚರಿಸಲು ಬುಕ್ಕಿಂಗ್ ಮಾಡಬಹುದಾಗಿದೆ ಹಾಗೂ ವಿಶೇಷ ರೈಲ್ವೆ ಟಿಕೆಟ್ ದರ ರಾಜಧಾನಿ ರೈಲುಗಳ ದರಕ್ಕೆ ಸಮವಾಗಿರುತ್ತದೆ. ಆರ್ಎಸಿ, ವೇಯ್ಟ್ ಲಿಸ್ಟ್ ಟಿಕೆಟ್ ಹೊಂದಿದ್ದರೆ ಪ್ರಯಾಣಿಸಲು ಅವಕಾಶವಿಲ್ಲ ಹಾಗೂ ಟಿಸಿ ಸಿಬ್ಬಂದಿ ಟಿಕೆಟ್ ನೀಡಲು ಅನುಮತಿ ಇರುವುದಿಲ್ಲ ಎಂದು ರೈಲ್ವೆ ಹೇಳಿದೆ.
ದೇಶದಾದ್ಯಂತ ಲಾಕ್ಡೌನ್ ಆರಂಭದಿಂದ ಪ್ರಯಾಣಿಕ ರೈಲ್ವೆಗಳ ಸೇವೆ ನಿಲ್ಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.