ಲಖನೌ: ನಿಶ್ಚಯವಾಗಿದ್ದ ಮದುವೆಯನ್ನು ಮುಂದೂಡಲಾಗದೇ, ಪೊಲೀಸ್ ಠಾಣೆಯ ಆವರಣದಲ್ಲಿರುವ ಶಿವನ ದೇವಸ್ಥಾನದಲ್ಲಿ ಜೋಡಿಯೊಂದು ಸರಳವಾಗಿ ವಿವಾಹವಾದ ಅಪರೂಪದ ಘಟನೆ ಚಂದೌಲಿಯಲ್ಲಿ ನಡೆದಿದೆ.
ಮಹುಜಿ ಗ್ರಾಮದ ನಿವಾಸಿ ಅನಿಲ್ ಮತ್ತು ಘಾಜಿಪುರ ಜಿಲ್ಲೆಯ ಜ್ಯೋತಿ ಅವರ ವಿವಾಹ ಏಪ್ರಿಲ್ 20ಕ್ಕೆ ನಿಗದಿಯಾಗಿತ್ತು. ಆದರೆ, ಲಾಕ್ಡೌನ್ ಇರುವುದರಿಂದ ಪೊಲೀಸ್ ಠಾಣೆಯನ್ನೇ ಇವರ ಮದುವೆಗೆ ವೇದಿಕೆಯಾಗಿಸಿಕೊಂಡಿದ್ದಾರೆ.
‘ವಧು ಮತ್ತು ವರನ ಕಡೆಯಿಂದ ಕೇವಲ ಹತ್ತು ಮಂದಿ ಪಾಲ್ಗೊಂಡಿದ್ದರು. ಲಾಕ್ಡೌನ್ನಿಂದಾಗಿ ಅವರು ಚಿಂತಿತರಾಗಿದ್ದರು. ನಮ್ಮನ್ನು ಸಂಪರ್ಕಿಸಿ, ಅವರ ಸಮಸ್ಯೆಗೆ ಪರಿಹಾರ ಕಂಡುಕೊಂಡರು. ಅಂತರ ಕಾಯ್ದುಕೊಂಡು ವಿವಾಹ ನೆರವೇರಿಸಲಾಯಿತು’ ಎಂದು ದೀನ ಪೊಲೀಸ್ ಠಾಣೆಯ ಎಸ್ಎಚ್ಒ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಕಳೆದ ಫೆಬ್ರುವರಿಯಲ್ಲಿ ಸಂಭವಿಸಿದ್ದ ದೋಣಿ ದುರಂತ ಸಂದರ್ಭದಲ್ಲಿ ಅನಿಲ್ ಹಲವರ ಪ್ರಾಣ ಉಳಿಸಿದನ್ನು ರಾಜೇಶ್ ಕುಮಾರ್ ಅವರು ನೆನಪಿಸಿಕೊಂಡರು.