ಜಮ್ಮು : ಕೊರೊನಾ ಸೋಂಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಹೊಸದಾಗಿ ಜಿಲ್ಲೆಗಳ ವರ್ಗೀಕರಣ ಮಾಡಿದೆ. ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಿಸಿದ ನಂತರ ಕೆಂಪು ವಲಯದ ಪಟ್ಟಿಯಿಂದ ಕಥುವಾ ಮತ್ತು ಸಾಂಬಾ ಜಿಲ್ಲೆಗಳನ್ನು ಕೈಬಿಡಲಾಗಿದೆ. ಅಂತೆಯೇ, ಹಸಿರು ವಲಯದ ಪಟ್ಟಿಯಿಂದ ಪೂಂಚ್ ಮತ್ತು ರಾಜೌರಿ ಜಿಲ್ಲೆಗಳನ್ನು ಕೈಬಿಡಲಾಗಿದೆ.
ಈ ನಾಲ್ಕು ಜಿಲ್ಲೆಗಳನ್ನು ಈಗ ಕಿತ್ತಳೆ ಬಣ್ಣದ ವಲಯದಲ್ಲಿ ಸೇರಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್.ಸುಬ್ರಹ್ಮಣ್ಯಂ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಒಂಬತ್ತು ಜಿಲ್ಲೆಗಳು ಅಂದರೆ ಶ್ರೀನಗರ, ಬುದಗಂ, ಅನಂತನಾಗ್, ಪುಲ್ವಾಮಾ, ಕುಲ್ಗಾಮ್, ಶೋಪಿಯಾನ್, ಬಾರಾಮುಲ್ಲಾ, ಕುಪ್ವಾರಾ ಹಾಗೂ ರಾಂಬಾನ್ ಜಿಲ್ಲೆಗಳು ಕೆಂಪು ವಲಯದಲ್ಲಿವೆ.
ಕಿತ್ತಳೆ ವಲಯದಲ್ಲಿ ಗಂಡೇರ್ಬಾಲ್, ಬಂಡಿಪೊರಾ, ಜಮ್ಮು, ಉದಂಪುರ್, ಕತು, ಸಾಂಬಾ, ರೇಸಿ, ರಾಜೌರಿ ಜಿಲ್ಲೆಗಳಿವೆ. ಹಸಿರು ವಲಯದಲ್ಲಿ ದೋಡ ಜಿಲ್ಲೆ ಮತ್ತು ಚೆನಾಬ್ ಕಣಿವೆ ಇದೆ.
ಕಥುವಾ ಜಹಿಲ್ಲೆಯಲ್ಲಿ ಲಖನ್ಪುರ ಕೆಂಪು ವಲಯದಲ್ಲಿದ್ದು, 500 ಮೀಟರ್ ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಇದುವರೆಗೂ 3,467 ಕೋವಿಡ್–19 ಪ್ರಕರಣಗಳು ವರದಿಯಾಗಿವೆ. 40 ಮಂದಿ ಸತ್ತಿದ್ದಾರೆ.
ಲಾಕ್ಡೌನ್ ನಿಯಮಗಳ ಸಡಿಲಿಕೆಯ ನಂತರ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಈಗ ಹೊಸದಾಗಿ ಜಿಲ್ಲೆಗಳ ವರ್ಗೀಕರಣ ಮಾಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಅವರ ಹೇಳಿಕೆ ತಿಳಿಸಿದೆ.