ಚಿಂತಾಮಣಿ: ಮನುಷ್ಯ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದರೆ ಏನೆಲ್ಲ ಸಾಧನೆ ಮಾಡಬಹುದು. ಆದ್ದರಿಂದ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ತಿಳಿಸಿದರು.
ಕರ್ನಾಟಕ ರೈತ ಸಂಘ ಹಾಗೂ ಹೊಸಕೋಟೆಯ ಎಂ.ವಿ. ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೆ ಆರೋಗ್ಯಕ್ಕಿಂತ ಮಿಗಿಲಾದ ಐಶ್ವರ್ಯವಿಲ್ಲ. ಅದರಲ್ಲೂ ವಿಶೇಷವಾಗಿ ವಯಸ್ಸಾದವರನ್ನು ಹೆಚ್ಚಾಗಿ ಕಾಯಿಲೆಗಳು ಬಾಧಿಸುತ್ತವೆ. ಆರೋಗ್ಯದ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆಯುವುದಿಲ್ಲ. ಕಾಯಿಲೆ ಉಲ್ಬಣಗೊಂಡಾಗ ಆಸ್ಪತ್ರೆಗೆ ಹೋಗುವರು. ಇದು ಅಪಾಯಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಡಾ. ಪ್ರಮೋದ್ಕುಮಾರ್ ಮಾತನಾಡಿ, ಬಡವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತಾಲ್ಲೂಕಿನಲ್ಲಿ 2 ನೇ ಬಾರಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಔಷಧಿಗಳನ್ನೂ ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದರು.
ಶಸ್ತ್ರಚಿಕಿತ್ಸೆ, ಗರ್ಭಿಣಿಯರು, ಮೂಳೆ ಮತ್ತು ಕೀಲು , ಕಿವಿ,ಮೂಗು, ಬಾಯಿ, ಗಂಟಲು, ನೇತ್ರ ಪರೀಕ್ಷೆ, ಚರ್ಮರೋಗ ಕಾಯಿಲೆಗೆ ತಜ್ಞ ವೈದ್ಯರು ಪರೀಕ್ಷಿಸಿ ಸಲಹೆ ನೀಡಿದರು.
ರೈತ ಸಂಘದ ಮುಖಂಡರಾದ ಜೆ.ವಿ.ರಘುನಾಥರೆಡ್ಡಿ, ಕೆ.ವೆಂಕಟರಾಮಯ್ಯ, ವಂಶಿಕೃಷ್ಣ, ಮಂಜುಳಾ, ಭರತ್ಕುಮಾರ್, ಕೆ.ಸತೀಶ್, ರವಿಕುಮಾರ್, ಕರ್ನಾಟಕ ರಕ್ಷಣಾ
ವೇದಿಕೆಯ ಅಂಬರೀಶ್ ಭಾಗವಹಿಸಿದ್ದರು.