ನವದೆಹಲಿ: ಕೋವಿಡ್–19 ಪಿಡುಗು ಹೆಚ್ಚುತ್ತಿರುವ ಕಾರಣ ಈ ವರ್ಷ ಭಾರತದಿಂದ ಹಜ್ ಯಾತ್ರೆಗಾಗಿ ಯಾರನ್ನೂ ಕಳುಹಿಸದಿರಲು ನಿರ್ಧರಿಸಲಾಗಿದೆ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿಮಂಗಳವಾರ ತಿಳಿಸಿದರು.
ಸೌದಿ ಅರೇಬಿಯಾದ ಹಜ್ಸಚಿವ ಮೊಹಮ್ಮದ್ ಸಲೇಹ್ ಅವರೊಂದಿಗೆ ಕಳೆದ ರಾತ್ರಿ ದೂರವಾಣಿ ಮೂಲಕ ಚರ್ಚೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಜ್ಯಾತ್ರೆಗಾಗಿ ಈ ಬಾರಿ ಯಾರನ್ನೂ ಕಳುಹಿಸದಂತೆ ಸಲೇಹ್ ಅವರೂ ಮನವಿ ಮಾಡಿದ್ದಾರೆ ಎಂದು ನಖ್ವಿ ಹೇಳಿದರು.
ಕೋವಿಡ್ ಹಿನ್ನೆಲೆಯಲ್ಲಿ, ಪವಿತ್ರವಾದ ಹಜ್ ಯಾತ್ರೆಯಲ್ಲಿ ಅಂತರರಾಷ್ಟ್ರೀಯ ಯಾತ್ರಾರ್ಥಿಗಳು ಭಾಗವಹಿಸುವುದಕ್ಕೆ ಸೌದಿ ಅರೇಬಿಯಾ ನಿರ್ಬಂಧ ಹೇರುವ ನಿರ್ಧಾರವನ್ನು ಆ ದೇಶವು ಸೋಮವಾರ ತೆಗೆದುಕೊಂಡಿದೆ.