ತಿರುಪತಿ:ಕೋವಿಡ್–19 ಹಿನ್ನೆಲೆಯಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ದಿನ ನಡೆಸಲಾಗುತ್ತಿದ್ದ ವಿಶೇಷ ಪೂಜೆ, ಸಹಸ್ರ ಕಳಸಾಭಿಷೇಕ ಮತ್ತು ವಸಂತೋತ್ಸವದಂತಹ ಆಚರಣೆಗಳನ್ನು ಸ್ಥಗಿತಗೊಳಿಸಲು ತಿರುಪತಿ–ತಿರುಮಲ ದೇವಸ್ಥಾನ ಕಮಿಟಿಯು ನಿರ್ಧರಿಸಿದೆ.
ತಿರುಪತಿಗೆ ಬರುವ ಯಾತ್ರಾರ್ಥಿಗಳು ಗುಂಪಾಗಿ ಸರತಿ ಸಾಲಿನಲ್ಲಿ ನಿಂತು ಕಾಯುವುದಕ್ಕೆ ನಿರ್ಬಂಧ ಹೇರಲಾಗಿದೆ.
‘ಕೊರೊನಾ ವೈರಸ್ ಹರಡುವಿಕೆ ಪರೀಕ್ಷಿಸಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಂಧ್ರಪ್ರದೇಶ ಸರ್ಕಾರವು ಆದೇಶಿಸಿದೆ. ಆ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಆಲೋಚಿಸಿದ್ದೇವೆ' ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ತಿಳಿಸಿದ್ದಾರೆ.
ಯಾತ್ರಾರ್ಥಿಗಳು ದೇವಸ್ಥಾನದ ಆವರಣದಲ್ಲಿ ಗುಂಪಾಗಿ ಸರತಿ ಸಾಲಿನಲ್ಲಿ ನಿಲ್ಲುವಂತಿಲ್ಲ. ದೇವರ ದರ್ಶನಕ್ಕೆ ಸಮಯವನ್ನು ನಿಗದಿ ಪಡಿಸಲಾಗುವುದು. ಅದಕ್ಕೆ ಕೂಪನ್(ಗುರುತಿನ ಚೀಟಿ) ನೀಡಲಾಗುವುದು ಎಂದು ಟಿಟಿಡಿ ಹೇಳಿದೆ.