ಮುಂಬೈ: ಕೋವಿಡ್-19 ಬಿಕ್ಕಟ್ಟಿನಿಂದ ಸೃಷ್ಟಿಯಾದ ಸಮಸ್ಯೆಗಳನ್ನು ನಿವಾರಿಸಲು ಮಹಾರಾಷ್ಟ್ರಕ್ಕೆ ಸೂಕ್ತ ಆರ್ಥಿಕ ನೆರವು ಕೋರಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಕೋವಿಡ್ -19 ಹಿನ್ನೆಲೆಯಲ್ಲಿ ಲಾಕ್ಡೌನ್ ಮಾಡಿದ ಕಾರಣ, ಮಹಾರಾಷ್ಟ್ರವು ಆರ್ಥಿಕವಾಗಿ ಹಿಂದುಳಿಯಲಿದೆ. ಸುಮಾರು ₹1 ಲಕ್ಷ ಕೋಟಿ ಕೊರತೆಯನ್ನು ರಾಜ್ಯ ಎದುರಿಸುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ಉಲ್ಲೇಖಿಸಿ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
'2020-2021 ಮಹಾರಾಷ್ಟ್ರ ಬಜೆಟ್ನಲ್ಲಿ ಸುಮಾರು 3,47,000 ಕೋಟಿ ಆದಾಯ ನಿರೀಕ್ಷಿಸಲಾಗಿತ್ತು. ಆದರೆ, ಅಲ್ಪಾವಧಿಯ ಆರ್ಥಿಕ ಚಟುವಟಿಕೆಗಳಿಂದ ಹೆಚ್ಚಿದನ್ನು ನಿರೀಕ್ಷಿಸಲು ಸಾಧ್ಯವಿಲ್ಲ' ಎಂದು ಪವಾರ್ ಹೇಳಿದ್ದಾರೆ.
ಒಂದು ತಿಂಗಳಿಂದ ಮಹಾರಾಷ್ಟ್ರವು ಸಂಪೂರ್ಣ ಲಾಕ್ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯವು ಸುಮಾರು ₹1 ಲಕ್ಷ ಕೋಟಿ ಕೊರತೆಯನ್ನು ಎದುರಿಸಲಿದೆ. ಕೇಂದ್ರ ಸರ್ಕಾರವು ಮಹಾರಾಷ್ಟ್ರಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು ಎಂದು ಹಿರಿಯ ನಾಯಕ ಶರದ್ ಪವಾರ್ ಒತ್ತಾಯಿಸಿದ್ದಾರೆ.