ಕೋಲ್ಕತ್ತ: ಕೊರೊನಾ ಸೋಂಕು ತಗುಲಿರುವ ರೋಗಿಗಳನ್ನು ಮತ್ತು ಸೋಂಕು ಶಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರಲ್ಲಿ ಅಗತ್ಯ ರಕ್ಷಣಾ ಸಾಧನದ ಕೊರತೆ ಇದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದ ಕೋಲ್ಕತ್ತದ ವೈದ್ಯರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದರು. ಇಲ್ಲಿನ ದಕ್ಷಿಣ 24 ಪರಗನಾಸ್ ಜಿಲ್ಲಯ ಮಹೇಸ್ತಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ ನಂತರ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅನ್ಕಾಲಜಿಸ್ಟ್ಇಂದ್ರನೀಲ್ ಖಾನ್ ಬುಧವಾರ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಈ ಬಗ್ಗೆ ವಿಚಾರಣೆ ನಡೆಸಿದ ಕೋಲ್ಕತ್ತಹೈಕೋರ್ಟ್ ವೈದ್ಯರಿಂದವಶ ಪಡಿಸಿಕೊಂಡಿರುವ ಮೊಬೈಲ್ ಫೋನ್ ಮತ್ತುಸಿಮ್ ಕಾರ್ಡ್ ವಾಪಸ್ ನೀಡುವಂತೆ ಪೊಲೀಸರಿಗೆ ಆದೇಶಿಸಿದೆ.
ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಶುಶ್ರೂಷೆ ನೀಡುತ್ತಿರುವ ವೈದ್ಯರಿಗೆ ರಾಜ್ಯ ಸರ್ಕಾರ ನೀಡಿರುವ ರಕ್ಷಣಾ ಸಾಧನಗಳು ಸಾಕಾಗುತ್ತಿಲ್ಲ ಎಂದು ಖಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿಪೋಸ್ಟ್ ಮಾಡಿದ್ದರು.
ಖಾನ್ ಅವರು ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡುವ ಮತ್ತು ದ್ವೇಷ ಸೃಷ್ಟಿಸುವ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರು ಕೇಸು ದಾಖಲಿಸಿದ್ದರು.ಮಾರ್ಚ್ 29ರಂದು ಖಾನ್ ಅವರನ್ನು ಸುದೀರ್ಘ ವಿಚಾರಣೆಗೊಳಪಡಿಸಿದ ಪೊಲೀಸರು ಅವರ ಕೈಯಲ್ಲಿದ್ದ ಫೋನ್ ಮತ್ತು ಸಿಮ್ ಕಾರ್ಡ್ ವಶಪಡಿಸಿಕೊಂಡಿದ್ದರು ಎಂದು ಖಾನ್ ಅವರ ವಕೀಲ ಲೋಕೆನಾಥ್ ಚಟರ್ಜಿ ಹೇಳಿದ್ದಾರೆ.
ಪ್ರಕರಣದ ಬಗ್ಗೆಹೈಕೋರ್ಟ್ ನ್ಯಾಯಮೂರ್ತಿ ಐಪಿ ಮುಖರ್ಜಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ್ದು ,ಖಾನ್ ಅವರ ಟ್ವೀಟ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉತ್ತರ ನೀಡಿದೆ ಎಂದಿದ್ದಾರೆ.
ಸಂವಿಧಾನದ 19ನೇ ವಿಧಿ ಪ್ರಕಾರ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಹೇಳಿದ ಕೋರ್ಟ್, ಅಭಿಪ್ರಾಯದ ಅಭಿವ್ಯಕ್ತಿ ಸರ್ಕಾರವನ್ನು ಅಪಖ್ಯಾತಿಗೆ ತರುವುದಾದರೆ, ಅಭಿಪ್ರಾಯವನ್ನು ವ್ಯಕ್ತಪಡಿಸುವ ವ್ಯಕ್ತಿಯನ್ನು ಬೆದರಿಸುವ ಮೂಲಕ ಈ ಆರೋಪವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಇನ್ನೊಬ್ಬ ವ್ಯಕ್ತಿ , ಸಾರ್ವಜನಿಕರಿಗೆ ಅಥವಾ ರಾಷ್ಟ್ರಕ್ಕೆ ಹಾನಿಯನ್ನುಂಟುಮಾಡುವ ಉದ್ದೇಶದಿಂದ ನಾಗರಿಕರು ಈ ಸ್ವಾತಂತ್ರ್ಯವನ್ನು ದುರುಪಯೋಗಿಸಲು ಪ್ರಯತ್ನಿಸಿದರೆ ಮಾತ್ರ ಕ್ರಮ ಕೈಗೊಳ್ಳಬಹುದು ಎಂದು ಹೇಳಿದ ಮುಖರ್ಜಿ, ನ್ಯಾಯಾಲಯದ ಆದೇಶವಿಲ್ಲದೆ ಇಲ್ಲದೆ ಅರ್ಜಿದಾರರನ್ನು ವಿಚಾರಣೆ ಮಾಡಬಾರದು ಎಂದುನಿರ್ದೇಶಿಸಿದರು.
ಎಲ್ಲಾ ಸಾಕ್ಷ್ಯಗಳು ಅಪರಾಧವನ್ನು ಸಾಬೀತುಪಡಿಸುವುದಾದರೆ ಅರ್ಜಿದಾರರನ್ನು ಬಂಧಿಸದೆಯೇ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬಹುದು ಎಂದು ಮುಖರ್ಜಿ ಹೇಳಿದ್ದಾರೆ. ಅದೇ ವೇಳೆಈ ವಿಷಯಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ಯ ಯಾವುದೇ ರೀತಿಯ ಪೋಸ್ಟ್ ಹಾಕಬಾರದು ಎಂದು ಮುಖರ್ಜಿ ವೈದ್ಯ ಖಾನ್ ಅವರಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.