ದೆಹಲಿ ದಿಲ್ಶಾದ್ ಗಾರ್ಡನ್: ಸೀಲಿಂಗ್ನಿಂದ 10 ದಿನದಲ್ಲಿ ಕೋವಿಡ್ ಗೆದ್ದ ಕಥೆ

ದೆಹಲಿ: ಕೊರೊನಾ ಸೋಂಕು ತಗುಲಿ ಮಾರ್ಚ್ ತಿಂಗಳ ಆರಂಭದಲ್ಲಿಯೇ ಹಾಟ್ ಸ್ಪಾಟ್ ಎಂದು ಕರೆಸಿಕೊಂಡಿದ್ದ ದೆಹಲಿಯ ದಿಲ್ಶಾದ್ ಗಾರ್ಡನ್ನಲ್ಲಿ ಕಳೆದ 10 ದಿನಗಳಿಂದ ಇಲ್ಲಿಯವರೆಗೆ ಒಂದೇ ಒಂದು ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿಲ್ಲ. ಇದಕ್ಕೆ ಕಾರಣ ಯುದ್ದೋಪಾದಿಯಲ್ಲಿ ಸ್ಥಳೀಯ ಆಡಳಿತ ಕೈಗೊಂಡ ಕ್ರಮದ ಪ್ರತಿಫಲ.
ಹೌದು, ಇದಕ್ಕೆ ಕಾರಣ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದ ಆಡಳಿತಾಧಿಕಾರಿಗಳು 125 ವೈದ್ಯಕೀಯ ತಂಡಗಳನ್ನು ರಚಿಸಿದರು. ಈ ತಂಡಗಳು 4,032 ಮನೆಗಳಿಗೆ ಭೇಟಿ ನೀಡಿ 15,000 ಮಂದಿಯನ್ನು ತಪಾಸಣೆಗೆ ಒಳಪಡಿಸಿದರು. ಕರ್ಫ್ಯೂ ಹೇರಿರುವುದೂ ಸೇರಿದಂತೆ ಸೋಂಕು ಹರಡದಂತೆ ಎಲ್ಲಾ ಕ್ರಮ ಕೈಗೊಂಡಿದೆ. ಅಲ್ಲದೆ, ಕೊರೊನಾ ಸೋಂಕು ವರದಿಯಾದ ಕೂಡಲೆ ದೆಹಲಿ ಸರ್ಕಾರವು ಈ ಪ್ರದೇಶದಲ್ಲಿ 'ಆಪರೇಷನ್ ಶೀಲ್ಡ್' ಅನ್ನು ಜಾರಿಗೆ ತಂದಿತು.
ಇದನ್ನೂ ಓದಿ: ದೆಹಲಿ ಸರ್ಕಾರಿ ವೈದ್ಯರಿಗೆ ಕೊರೊನಾ ಸೋಂಕು: ಆಸ್ಪತ್ರೆಯ 45 ಮಂದಿಗೆ ಕ್ವಾರಂಟೈನ್
ಮನೆ ಮನೆ ಭೇಟಿ, ಪ್ರತ್ಯೇಕತೆ ಮತ್ತು ಟ್ರ್ಯಾಕಿಂಗ್, ಮನೆ ಬಾಗಿಲಿಗೆ ಅಗತ್ಯ ವಸ್ತುಗಳ ಪೂರೈಕೆ, ಸ್ಥಳೀಯ ನೈರ್ಮಲ್ಯೀಕರಣ ಮತ್ತು ಮನೆ-ಮನೆಗೆ ತಪಾಸಣೆ ಇವೆಲ್ಲವೂ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
ಮಾರ್ಚ್ ತಿಂಗಳ ಆರಂಭದಲ್ಲಿ ಈ ಪ್ರದೇಶದ 38 ವರ್ಷದ ಮಹಿಳೆಯೊಬ್ಬರು ದುಬೈನಲ್ಲಿದ್ದ ತನ್ನ ಪತಿಯನ್ನು ಭೇಟಿ ಮಾಡಿ 19 ವರ್ಷದ ತನ್ನ ಪುತ್ರನೊಂದಿಗೆ ವಾಪಸಾದರು. ಬಂದ ಎರಡು ದಿನಕ್ಕೆ ಮಹಿಳೆಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿತು. ಕೂಡಲೆ ಮಹಿಳೆಯು ಸ್ಥಳೀಯ ಕ್ಲಿನಿಕ್ ಒಂದರ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದರು. ಆದರೂ ಜ್ವರ ಹತೋಟಿಗೆ ಬರದಿದ್ದಾಗ ಅವರನ್ನು ಗುರುತೇಗ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಯಿತು. ನಂತ ಮಾರ್ಚ್ 15ರಂದು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ರಕ್ತ ಪರೀಕ್ಷೆ ನಡೆಸಿದಾಗ ಅಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತು.
ಮಾರ್ಚ್18ರ ನಂತರ ಸ್ಥಳೀಯ ಆಡಳಿತ ಮಹಿಳೆ ಭೇಟಿ ಮಾಡಿದ್ದ 81 ಮಂದಿಯನ್ನು ಪತ್ತೆ ಮಾಡಿ ಎಲ್ಲರಿಗೂ ರಕ್ತಪರೀಕ್ಷೆ ನಡೆಸಿದರು. ನಾಲ್ಕು ದಿನಗಳ ನಂತರ ಐದು ಮಂದಿ ಮಹಿಳೆಯ ತಾಯಿ ಸೋದರ, ಇಬ್ಬರು ಮಕ್ಕಳು, ಅಲ್ಲದೆ ಸ್ಥಳೀಯ ವೈದ್ಯರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಯಿತು.
ನನಗೆ ದೆಹಲಿಯ ದಿಲ್ಶಾದ್ ಗಾರ್ಡನ್ ಕೊರೊನಾ ಸೋಂಕು ಪ್ರಕರಣಗಳಿಂದ ನನಗೆ ಭಯವಾಗಿತ್ತು. ಆದರೆ, ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರ ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸಿ ದಿಲ್ಶಾದ್ ಗಾರ್ಡನ್ ಪ್ರದೇಶವನ್ನು ಈಗ ಕೊರೊನಾ ಸೋಂಕಿನಿಂದ ಪಾರುಮಾಡಿದ್ದಾರೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಶುಕ್ರವಾರ ಹೇಳಿದ್ದಾರೆ.
ಎಂಟು ಮಂದಿಯಲ್ಲಿ ಪಾಸಿಟಿವ್ ವರದಿ ಬಂದ ಕೂಡಲೆ ದಿಲ್ಶಾದ್ ಗಾರ್ಡನ್ ಪ್ರದೇಶವನ್ನು ಕೊರೊನಾ ಸೋಂಕು ನಿಯಂತ್ರಣ ವಲಯ ಎಂದು ಘೋಷಿಸಲಾಯಿತು ಮತ್ತು ಅಧಿಕಾರಿಗಳು ಸೋಂಕಿತ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ಜನರನ್ನು ಪತ್ತೆಹಚ್ಚಲು ಪ್ರಾರಂಭಿಸಿದರು. “ಆಕೆಯ ಪುತ್ರ ಅಸಹಕಾರ ತೋರುತ್ತಿದ್ದ ಆದ್ದರಿಂದ ನಾವು ಮಾಹಿತಿ ಪಡೆಯಲು ಸ್ಥಳೀಯ ಪೊಲೀಸರ ಸಹಾಯವನ್ನು ಪಡೆಯಬೇಕಾಯಿತು. ಅಲ್ಲದೆ, ಕಣ್ಗಾವಲು ಇರಿಸಬೇಕಾದ ಕೆಲವು ಜನರನ್ನು ಗುರುತಿಸಲು ಅವರ ಮನೆಯ ಬಳಿ ಸ್ಥಾಪಿಸಲಾದ ಸಿಸಿಟಿವಿ ಕ್ಯಾಮೆರಾಗಳ ತುಣುಕನ್ನು ಸಹ ಬಳಸಿದ್ದೇವೆ ”ಎಂದು ಕಾರ್ಯಾಚರಣೆಗಳ ನೇತೃತ್ವ ವಹಿಸಿದ್ದ ಸ್ಥಳೀಯ ಆಡಳಿತಾಧಿಕಾರಿ ಡಾ.ಎಸ್. ಕೆ ನಾಯಕ್ ಹೇಳುತ್ತಾರೆ. ದಿಲ್ಶಾದ್ ಗಾರ್ಡನ್ ಎಲ್ಲಾ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದೆ.
38 ವರ್ಷದ ಮಹಿಳೆಯ ಕುಟುಂಬವನ್ನು ಭೇಟಿ ಮಾಡಿದ ಯಾರಾದರೂ ಇದ್ದರೆ ಪರೀಕ್ಷೆಗೆ ಒಳಗಾಗುವಂತೆ ಬಹಿರಂಗವಾಗಿ ಈಗಲೂ ಹೇಳಿದ್ದೇವೆ ಎಂದು ಆಡಳಿತಾಧಿಕಾರಿ ಹೇಳುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.

