ನವದೆಹಲಿ: ಮುದ್ರಣ ಕಾಗದಗಳ ಮೇಲೆ ಶೇ 10ರಷ್ಟು ಸುಂಕ ವಿಧಿಸುವ ಬಜೆಟ್ನ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಸಿಪಿಐ ಸದಸ್ಯ ಬಿನಯ್ ವಿಶ್ವಂ ಶುಕ್ರವಾರ ರಾಜ್ಯಸಭೆಯಲ್ಲಿ ಒತ್ತಾಯಿಸಿದರು.
‘ಈ ಪ್ರಸ್ತಾಪ ವೃತ್ತಪತ್ರಿಕೆ ಉದ್ಯಮಕ್ಕೆ ದೊಡ್ಡ ಮಟ್ಟಿನ ಹೊಡೆತವನ್ನು ನೀಡಲಿದೆ.ಹಲವು ಪತ್ರಿಕೆಗಳು ಮುಚ್ಚುವ ಸ್ಥಿತಿಯನ್ನು ತಲುಪಬಹುದು. ಕೂಡಲೇ ಇದನ್ನು ಕೈಬಿಡಬೇಕು’ ಎಂದು ಅವರು ಆಗ್ರಹಪಡಿಸಿದರು.
‘ಹಿಂದೆ ಮುದ್ರಣ ಕಾಗದದ ಮೇಲೆ ಆಮದು ಸುಂಕ ಇರಲಿಲ್ಲ. ಮಾಲಿನ್ಯ ನಿಯಂತ್ರಣ ಕ್ರಮವಾಗಿ ಮುದ್ರಣ ಕಾಗದದ ಉತ್ಪಾದನೆಯನ್ನು ಚೀನಾ ನಿಲ್ಲಿಸಿದ ನಂತರ ಬೆಲೆ ಶೇ 40ರಿಂದ 60ರವರೆಗೂ ಏರಿಕೆಯಾಗಿದೆ. ಈಗ ಸುಂಕ ವಿಧಿಸುವ ಪ್ರಸ್ತಾಪ ವೃತ್ತಪತ್ರಿಕೆಗಳ ಅಸ್ತಿತ್ವಕ್ಕೇ ಧಕ್ಕೆ ತರಲಿದೆ’ ಎಂದು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವದ ರಕ್ಷಣೆಯ ದೃಷ್ಟಿಯಿಂದ ವೃತ್ತಪತ್ರಿಕೆಗಳ ಉದ್ಯಮದ ಉಳಿವು ಅಗತ್ಯವಾಗಿದೆ. ಸಾರ್ವಜನಿಕರ ಮಾಹಿತಿ ಹಕ್ಕು ದೃಷ್ಟಿಯಿಂದ ಸರ್ಕಾರ ಈ ವಿಷಯವನ್ನು ನೋಡಬೇಕು ಎಂದು ಮನವಿ ಮಾಡಿದರು.