ನವದೆಹಲಿ (ಪಿಟಿಐ): ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರ ಪತ್ನಿ, ಮಾಜಿ ಶಾಸಕಿ ನವಜೋತ್ ಕೌರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದು, ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ.
ಪಕ್ಷ ತಮಗೆ ಟಿಕೆಟ್ ನೀಡಲಿದೆ ಎಂಬ ಭರವಸೆಯಿಂದ ಸಾರ್ವಜನಿಕ ರ್ಯಾಲಿಗಳಲ್ಲಿ ಅವರು ತೊಡಗಿಸಿಕೊಂಡಿದ್ದರು. ಆದರೆ ಚಂಡೀಗಡ ಲೋಕಸಭಾ ಕ್ಷೇತ್ರದಿಂದ ಕೌರ್ ಬದಲಿಗೆಮಾಜಿ ರೈಲ್ವೆ ಸಚಿವ ಪವನ್ ಬನ್ಸಾಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
‘ಉತ್ತಮ ಕೆಲಸ ಮಾಡಲು ಒಬ್ಬ ಮಹಿಳೆಯನ್ನು ಪಕ್ಷ ಪ್ರೋತ್ಸಾಹಿಸುತ್ತದೆ ಎಂದು ನಾನು ಭಾವಿಸಿದ್ದೆ’ ಎಂದಿರುವ ಕೌರ್, ರಾಜಕೀಯ ಭವಿಷ್ಯದ ಕನಸಿಟ್ಟುಕೊಂಡು ವೈದ್ಯ ವೃತ್ತಿಯನ್ನು ತೊರೆದು ಬಂದಿದ್ದೆ ಎಂದು ಹೇಳಿದ್ದಾರೆ.
ಪಕ್ಷದ ಪ್ರಬಲ ನೆಲೆ ಎನಿಸಿರುವ ಚಂಡಿಗಡ ಕ್ಷೇತ್ರದಿಂದ ಮನೀಶ್ ತಿವಾರಿ ಅವರೂ ಟಿಕೆಟ್ ಆಕಾಂಕ್ಷಿಯಾಗಿದ್ದರು. 2014ರಲ್ಲಿ ಬಿಜೆಪಿಯ ಕಿರಣ್ ಖೇರ್ ಅವರು ಈ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ್ದರು.
‘ನಾನೀಗ ಒಬ್ಬಂಟಿ. ನನ್ನ ಪ್ರಕರಣದಲ್ಲಿ ನಾನೇ ಹೋರಾಡುತ್ತೇನೆ. ಚಂಡಿಗಡದಿಂದ ಸ್ಪರ್ಧೆಗೆ ನಿರ್ಧರಿಸಿದ ಬಳಿಕ ಬೇರಾವುದೇ ಕ್ಷೇತ್ರದಿಂದ ಕಣಕ್ಕಿಳಿಯುವ ಆಲೋಚನೆಯೂ ಬಂದಿರಲಿಲ್ಲ’ ಎಂದು ಕೌರ್ ಹೇಳಿದ್ದಾರೆ.
ಬನ್ಸಾಲ್ ಅವರ ಆಯ್ಕೆಯನ್ನು ಬೇಸರದಿದಲೇ ಅನುಮೋದಿಸಿರುವ ಕೌರ್, ‘ಪಕ್ಷದ ಆಯ್ಕೆಯನ್ನು ಸ್ವಾಗತಿಸುತ್ತೇನೆ. ಅವರೇನೂ ಹೊಸಬರಲ್ಲ. ಅಭ್ಯರ್ಥಿ ಬಗ್ಗೆ ನಿಜವಾಗಿ ತೀರ್ಮಾನ ತೆಗೆದುಕೊಳ್ಳುವವರು ಜನ ಮಾತ್ರ’ ಎಂದು ಹೇಳಿದ್ದಾರೆ.
ಬನ್ಸಾಲ್ ಪರ ಪ್ರಚಾರ ಮಾಡುವಿರಾ ಎಂಬ ಪ್ರಶ್ನೆಗೆ, ‘ಬಹುಶಃ ಅವರಿಗೆ ನನ್ನ ಅಗತ್ಯ ಇಲ್ಲ. ಅವರು ಕರೆ ಮಾಡಿದರೆ ಖಂಡಿತ ಬೆಂಬಲಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಟ್ಟಿ:ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 20 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಪತ್ನಿ ಪ್ರಿನೀತ್ ಕೌರ್ ಅವರನ್ನು ಪಟಿಯಾಲ ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕಿಳಿಸಿದೆ. ಮಾಜಿ ಸಚಿವ ಸುಬೋಧ್ಕಾಂತ್ ಸಹಾಯ್ ಅವರನ್ನು ಜಾರ್ಖಂಡ್ನ ರಾಂಚಿಯಿಂದ ಕಣಕ್ಕಿಳಿಸಿದೆ.
ಹಿಮಾಚಲ ಪ್ರದೇಶ ಕಂಗ್ರಾದಿಂದ ಪವನ್ ಕಾಜಲ್ ಅವರು ಸ್ಪರ್ಧಿಸುತ್ತಿದ್ದಾರೆ.