ಕೋಲ್ಕತ್ತಾ: ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿರುವ ಅಂಪನ್ ಚಂಡಮಾರುತವು ರಾಜ್ಯದಲ್ಲಿ ಈ ವರೆಗೆ 72 ಮಂದಿಯನ್ನು ಬಲಿ ಪಡೆದಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಮರ ಉರುಳಿ ಬಿದ್ದು, ವಿದ್ಯುತ್ ಅವಘಡದಿಂದಲೇ ಬಹುತೇಕ ಸಾವುಗಳು ಸಂಭವಿಸಿವೆ.ಮೃತರ ಕುಟುಂಬಗಳಿಗೆ ತಲಾ ₹2.5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
72 people have died in West Bengal so far: West Bengal Chief Minister Mamata Banerjee (in file pic) #CycloneAmphan pic.twitter.com/ISbqDyyy0N
— ANI (@ANI) May 21, 2020
ಇದೇ ಅಂಪನ್ ಚಂಡಮಾರುತ ಬಾಂಗ್ಲಾದೇಶದಲ್ಲೂ ರುದ್ರ ನರ್ತನ ಮಾಡಿದ್ದು, ಅಲ್ಲಿ ಈ ವರೆಗೆ 10 ಮಂದಿ ಮೃತಪಟ್ಟಿದ್ದಾರೆ.
ಸ್ವಾತಂತ್ರ್ಯಾ ನಂತರದ ಅತೀ ಭೀಕರ ಚಂಡಮಾರುತಗಳಲ್ಲಿ ಒಂದೆನಿಸಿರುವ ಅಂಪನ್ ಹೊಡೆತಕ್ಕೆ ಪಶ್ಚಿಮ ಬಂಗಾಳ ಜರ್ಜರಿತಗೊಂಡಿದೆ. ಗಂಟೆಗೆ 190 ಕಿ.ಮೀ ವೇಗದಲ್ಲಿ ಬುಧವಾರ ಮಧ್ಯಾಹ್ನ 2.30ಕ್ಕೆ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿರುವ ಅಂಪನ್ ಈ ವರೆಗೆ ಅಲ್ಲಿ ಭಾರಿ ಪ್ರಮಾಣದ ದಾಂಧಲೆ ಸೃಷ್ಟಿ ಮಾಡಿದೆ. ಪರಿಣಾಮವಾಗಿ 72 ಮಂದಿ ಮೃತಪಟ್ಟಿದ್ದಾರೆ.
ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಕೇಂದ್ರವು ನಾಲ್ಕು ಹೆಚ್ಚುವರಿ ತಂಡಗಳನ್ನು ಏರ್ ಲಿಫ್ಟ್ ಮೂಲಕ ಸಾಗಿಸಿದೆ.
ಇದನ್ನೂ ಓದಿ:ಅಂಪನ್ ಚಂಡಮಾರುತ ಸಂಕಷ್ಟ
ಪಶ್ಚಿಮ ಬಂಗಾಳದ ದಿಘಾ ಮತ್ತು ಬಾಂಗ್ಲಾದೇಶದ ಹಾತಿಯಾ ದ್ವೀಪದ ನಡುವಣ ಭಾಗದಲ್ಲಿ ‘ಅಂಪನ್’ ಭೂ ಪ್ರದೇಶವನ್ನು ಪ್ರವೇಶಿಸಿದೆ. ಕರಾವಳಿ ಪ್ರದೇಶದಲ್ಲಿ ಹಲವು ಕಟ್ಟಡಗಳು, ಮರಗಳು ಮತ್ತು ವಿದ್ಯುತ್ ಕಂಬಗಳನ್ನು ನೆಲಕ್ಕೆ ಉರುಳಿಸಿದೆ.
ಚಂಡಮಾರುತ ಪ್ರವೇಶಿಸುವುದಕ್ಕೂ ಮೊದಲೇ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ತೀರದ 6.58 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು.
ದುರಂತದ ನೆನಪು
ಅಂಪನ್, ಸ್ವಾತಂತ್ರ್ಯಾನಂತರ ಭಾರತಕ್ಕೆ ಅಪ್ಪಳಿಸಿರುವ ಎರಡನೇ ತೀವ್ರ ಸ್ವರೂಪದ ಚಂಡಮಾರುತ (ಸೂಪರ್ ಸೈಕ್ಲೋನ್). 1999ರ ಅಕ್ಟೋಬರ್ 29ರಂದು ಮೊದಲ ಸೂಪರ್ ಸೈಕ್ಲೋನ್ ದಾಳಿಯಿಟ್ಟಿತ್ತು. ಒಡಿಶಾ ಕರಾವಳಿಗೆ ಅಪ್ಪಳಿಸಿದ್ದ ಅದು ದೊಡ್ಡ ಅನಾಹುತವನ್ನೇ ಸೃಷ್ಟಿಸಿತ್ತು. ಶತಮಾನದಲ್ಲಿ ದಾಖಲಾದ ಈ ಭೀಕರ ಚಂಡಮಾರುತದಲ್ಲಿ ಸುಮಾರು 9 ಸಾವಿರ ಜನರು ಮೃತಪಟ್ಟಿದ್ದರು.
ಅಂದಾಜು 260 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿಯು 36 ಗಂಟೆಗಳ ಕಾಲ ಕರಾವಳಿಯನ್ನು ಅಕ್ಷರಶಃ ರೌದ್ರವಾಗಿಸಿತ್ತು. ಕರಾವಳಿಯ 14 ಜಿಲ್ಲೆಗಳು, 2 ಕರಾವಳಿ ಪಟ್ಟಣಗಳು ತೀವ್ರ ಹಾನಿಗೀಡಾಗಿದ್ದವು. 9,885 ಜನರು ಮೃತಪಟ್ಟರು ಎಂದು ಅಧಿಕೃತ ದಾಖಲೆಗಳ ಹೇಳುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.