ನವದೆಹಲಿ: ‘ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಯುಧಪೂಜೆ ದಿನವಾದ ಮಂಗಳವಾರ ಪ್ಯಾರಿಸ್ನಲ್ಲಿ ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ನೆರವೇರಿಸಲಿದ್ದಾರೆ. ಭಾರತೀಯ ವಾಯುಪಡೆಯ ಸಂಸ್ಥಾಪನಾ ದಿನ (ಅ.8) ಸಹ ಇದೇ ಸಂದರ್ಭದಲ್ಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ವಿಮಾನ ಹಸ್ತಾಂತರವಾದ ಬಳಿಕ, ರಫೇಲ್ ಯುದ್ಧವಿಮಾನ ಹಾರಾಟದ ಮೊದಲ ಅನುಭವ ಗಳಿಸಲು ರಾಜನಾಥ್ ಸಿಂಗ್ ಅವರು ಪ್ಯಾರಿಸ್ನ ವಾಯುನೆಲೆಯಿಂದ ಪ್ರಯಾಣ ಬೆಳೆಸಲಿದ್ದಾರೆ.
‘ಹಲವು ವರ್ಷಗಳಿಂದ ರಾಜನಾಥ್ ಅವರು ದಸರಾ ವೇಳೆ ಆಯುಧ ಪೂಜೆ ಮಾಡುವ ರೂಢಿ ಇರಿಸಿಕೊಂಡಿದ್ದಾರೆ. ಹಿಂದಿನ ಎನ್ಡಿಎ ಸರ್ಕಾರದ ಅವಧಿಯಲ್ಲಿ ಗೃಹಸಚಿವರಾಗಿದ್ದ ವೇಳೆಯೂ ಪೂಜೆ ನೆರವೇರಿಸಿದ್ದರು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತ ಖರೀದಿಸುತ್ತಿರುವ 36 ರಫೇಲ್ ಯುದ್ಧ ವಿಮಾನಗಳಲ್ಲಿ ಒಂದು ವಿಮಾನವನ್ನು ಮಾತ್ರ ಫ್ರಾನ್ಸ್ಮಂಗಳವಾರ ಹಸ್ತಾಂತರಿಸಲಿದೆ. ಆದರೆ ಮೊದಲ ಹಂತದಲ್ಲಿ ನೀಡಲಾಗುವ ನಾಲ್ಕು ವಿಮಾನಗಳು ಮೇ ತಿಂಗಳಲ್ಲಿ ಭಾರತಕ್ಕೆ ಬರಲಿವೆ.