ನವದೆಹಲಿ: ಕಾಂಗ್ರೆಸ್ ಪಕ್ಷವು ದೆಹಲಿಯ ಆರು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಈಶಾನ್ಯ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ, ತಾನು ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ, ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದಂತಾಗಿದೆ.
ಕಾಂಗ್ರೆಸ್ನ ದೆಹಲಿ ಘಟಕದ ಮಾಜಿ ಮುಖ್ಯಸ್ಥ ಅಜಯ ಮಾಕನ್ ಹಾಗೂ ಅರವಿಂದ್ ಸಿಂಗ್ ಲವ್ಲಿ ಅವರು ಕ್ರಮವಾಗಿ ನವದೆಹಲಿ ಹಾಗೂ ಪೂರ್ವ ದೆಹಲಿ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಚಾಂದಿನಿಚೌಕ್ನಿಂದ ಜೆ.ಪಿ. ಅಗರ್ವಾಲ್ ಸ್ಪರ್ಧಿಸಲಿದ್ದಾರೆ. ಹಿಂದೆ ಈ ಕ್ಷೇತ್ರವನ್ನು ಕಪಿಲ್ ಸಿಬಲ್ ಪ್ರತಿನಿಧಿಸಿದ್ದರು. ವಾಯವ್ಯ ದೆಹಲಿಯಿಂದ ರಾಜೇಶ್ ಲಿಲೋಠಿಯ ಹಾಗೂ ಪಶ್ಚಿಮ ದೆಹಲಿಯಿಂದ ಮಹಾಬಲ ಮಿಶ್ರಾ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಘೋಷಿಸಿದೆ.