ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯು ‘ದೈತ್ಯ ಮತ್ತು ಪುಟಾಣಿ’ಯ ಹೋರಾಟವಾಗಿತ್ತು. ಫಲಿತಾಂಶ ಗಮನಿಸಿದರೆ ದೈತ್ಯನ ಎದುರು ಪುಟಾಣಿಯ ವಿಜಯ ಸಾಬೀತಾಗಿದೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ವ್ಯಾಖ್ಯಾನಿಸಿದ್ದಾರೆ.
ಚುನಾವಣೆಯ ಫಲಿತಾಂಶಗಳ ಮುನ್ನಡೆ ಗಮನಿಸಿದ ನಂತರ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯಂಥ ದೈತ್ಯನನ್ನು ಆಪ್ನಂಥ ಪುಟಾಣಿ ಸೋಲಿಸಿರುವುದು ಗಮನಾರ್ಹ ಸಂಗತಿ’ ಎಂದು ಹೇಳಿದ್ದಾರೆ.
‘ಪ್ರಧಾನಿಯಿಂದ ತಳಮಟ್ಟದ ಕಾರ್ಯಕರ್ತರವರೆಗೆ ಬಿಜೆಪಿಯ ದೊಡ್ಡಪಡೆಯೇ ದೆಹಲಿಯಲ್ಲಿ ಪ್ರಚಾರ ಮಾಡಿತ್ತು. ಜನರಿಗೆ ಬಿಜೆಪಿ ಅಥವಾ ಆಪ್ನಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಜನರು ಅಭಿವೃದ್ಧಿಗೆ ಮತ ನೀಡಿದರು. ದೈತ್ಯನ ಎದುರು ಪುಟಾಣಿಯ ಗೆಲುವು ಇದರಿಂದ ಸಾಧ್ಯವಾಯಿತು ಎಂದರು.
ದೆಹಲಿ ವಿದ್ಯಮಾನದ ಬಗ್ಗೆ ಪ್ರತಿಕ್ರಿಯಿಸಿದ್ದ ಮತ್ತೋರ್ವ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್, ‘ಇಂಥ ಫಲಿತಾಂಶ ಬರುತ್ತೆ ಆಂತ ನಮಗೆ ಗೊತ್ತಿತ್ತು. ಆದರೆ ಗೆದ್ದೆಗೆಲ್ತೀವಿ ಎಂದು ಬೀಗುತ್ತಿದ್ದ ಬಿಜೆಪಿಗೆ ಏನಾಯಿತು’ ಎಂದು ಪ್ರಶ್ನಿಸಿದ್ದರು.
ಮಧ್ಯಾಹ್ನ 12.30ರ ಹೊತ್ತಿಗೆ ಆಪ್ 58, ಬಿಜೆಪಿ 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಕಾಂಗ್ರೆಸ್ನ ಶೂನ್ಯ ಸಂಪಾದನೆ ಮುಂದುವರಿದಿತ್ತು.