ನವದೆಹಲಿ: ದೆಹಲಿ ಮತ್ತು ನೋಯ್ಡಾದ ಸಾಗಣೆ ವಾಹನಗಳ ಸಂಘಗಳು ಗುರುವಾರ ಮುಷ್ಕರಕ್ಕೆ ಕರೆ ನೀಡಿದ್ದು,ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್ಸಿಆರ್)ದಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ತಿದ್ದುಪಡಿಯಾದ ಮೋಟಾರು ವಾಹನ ಕಾಯ್ಡೆ ಅಡಿಯಲ್ಲಿ ರಸ್ತೆ ಸಂಚಾರ ನಿಯಮ ಉಲ್ಲಂಘನೆಗಳಿಗೆ ಅತಿಯಾದ ದಂಡ ವಿಧಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಸಾರ್ವಜನಿಕ ಸಾರಿಗೆಗಳೂ ಸಹ ರಸ್ತೆಗೆ ಇಳಿಯುವುದು ಅನುಮಾನವಾಗಿದೆ. ಇದರಿಂದಾಗಿ ನಿತ್ಯದ ಚಟುವಟಿಕೆಗಳಲ್ಲಿ ಸಾಕಷ್ಟು ವ್ಯತ್ಯಯ ಉಂಟಾಗಲಿದೆ. ಹೊಸ ನಿಯಮಗಳಿಂದಾಗಿ ದೆಹಲಿ ರಸ್ತೆಗಳಲ್ಲಿ ಸಂಚಾರ ಪರಿಸ್ಥಿತಿ ಉತ್ತಮಗೊಂಡಿರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇತ್ತೀಚೆಗೆ ಹೇಳಿದ್ದರು.
ಇದನ್ನೂ ಓದಿ: ಸೆಪ್ಟೆಂಬರ್ 1ರಿಂದ ಸಂಚಾರ ನಿಯಮ ಕಠಿಣ
ಮುಷ್ಕರಕ್ಕೆ ಕರೆ ನೀಡಿರುವ ಯುನೈಟೆಡ್ ಫ್ರಂಟ್ ಆಫ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ಸ್(ಯುಎಫ್ಟಿಎ)ವು ಒಟ್ಟು 41 ಸಂಘಗಳು ಹಾಗೂ ಹಲವು ಒಕ್ಕೂಟಗಳನ್ನು ಒಳಗೊಂಡಿದೆ. ಟ್ರಕ್ಗಳು, ಬಸ್, ಆಟೋ, ಟೆಂಪೊ, ಮ್ಯಾಕ್ಸಿ ಕ್ಯಾಬ್ ಹಾಗೂ ಟ್ಕಾಕ್ಸಿ ಸಂಘಗಳು ಮುಷ್ಕರ ನಡೆಸುತ್ತಿವೆ.
ಖಾಸಗಿ ಬಸ್ಗಳು, ಆ್ಯಪ್ ಆಧಾರಿತ ಕ್ಯಾಬ್ಗಳು, ಗ್ರಾಮೀಣ ಸಾರಿಗೆ ಮತ್ತು ಶಾಲಾ ವಾಹನಗಳು ಗುರುವಾರ ರಸ್ತೆಗಿಳಿಯದಿರಲು ನಿರ್ಧರಿಸಿವೆ. ಒಂದು ದಿನದ ಮುಷ್ಕರದಿಂದಾಗಿ ಸಾರಿಗೆ ವಲಯದಲ್ಲಿ ಸುಮಾರು ₹23,000 ಕೋಟಿ ಆದಾಯ ನಷ್ಟವಾಗಲಿದೆ.
ಇದನ್ನೂ ಓದಿ:ಸಂಚಾರ ನಿಯಮ ಮತ್ತು ಪ್ರಶ್ನಿಸುವ ಹಕ್ಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.