ನವದೆಹಲಿ: ದೆಹಲಿಯಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದ್ದು, ಬುಧವಾರವೂ ಸಂಸತ್ನ ಉಭಯ ಸದನಗಳಲ್ಲಿ ಕಲಾಪಕ್ಕೆ ಅವಕಾಶ ದೊರೆಯಲಿಲ್ಲ.
ಲೋಕಸಭೆಯಲ್ಲಿ ಎರಡು ಬಾರಿ ಕಲಾಪ ಮುಂದೂಡಿದ ನಂತರವೂ ವಿಪಕ್ಷ ಸದಸ್ಯರು ಪ್ರತಿಭಟನೆ ಕೈಬಿಡಲಿಲ್ಲ.
ಮಧ್ಯಾಹ್ನ 2 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗದ್ದಲದ ನಡುವೆಯೇ ನೇರ ತೆರಿಗೆಗಳ (ವಿವಿಧೆಡೆಯಿಂದ ವಿಶ್ವಾಸದೆಡೆಗೆ) ಮಸೂದೆ ಮಂಡಿಸಿದರು. ಈ ಸಂದರ್ಭ ಸ್ಪೀಕರ್ ಪೀಠದ ಎದುರು ಜಮಾಯಿಸಿದ ವಿರೋಧ ಪಕ್ಷಗಳ ಸದಸ್ಯರ ಘೋಷಣೆ ಮುಂದುವರಿದಿದ್ದರಿಂದ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ರಾಜ್ಯಸಭೆಯಲ್ಲಿ ಕಲಾಪ ಆರಂಭ ಆಗುತ್ತಿದ್ದಂತೆಯೇ ವಿರೋಧ ಪಕ್ಷಗಳ ಸದಸ್ಯರಿಂದ ಘೋಷಣೆಗಳು ಕೇಳಿಬಂದಿದ್ದರಿಂದ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.