ನವದೆಹಲಿ: ಐದು ದಿನ ಭಾರಿ ಹಿಂಸಾಚಾರಕ್ಕೆ ತುತ್ತಾದ ಈಶಾನ್ಯ ದೆಹಲಿಯ ಕೆಲ ಭಾಗಗಳು ಸಹಜ ಸ್ಥಿತಿಗೆ ಮರಳುತ್ತಿರುವ ದೃಶ್ಯಗಳು ಶುಕ್ರವಾರ ಕಂಡು ಬಂದಿವೆ.
ಪ್ರತಿಬಂಧಕ ಆಜ್ಞೆಯನ್ನು 10 ತಾಸು ಸಡಿಲಿಸಲಾಗಿತ್ತು. ಗಲಭೆಗಳಲ್ಲಿ ಗಾಯಗೊಂಡಿದ್ದವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಹಾಗಾಗಿ, ದಳ್ಳುರಿಗೆ ಬಲಿಯಾದವರ ಸಂಖ್ಯೆ 42ಕ್ಕೆ ಏರಿದೆ.
ಜಾಫರಾಬಾದ್, ಭಜನ್ಪುರ ಮತ್ತು ಶಿವ ವಿಹಾರದಂತಹ ಪ್ರದೇಶಗಳಲ್ಲಿ ಕೆಲವು ಅಂಗಡಿಗಳು ತೆರೆದಿದ್ದವು. ಬೀದಿಯಲ್ಲಿ ಬಿದ್ದಿರುವ ಅವಶೇಷಗಳ ನಡುವೆಯೂ ಜನರು ಹೊರಗೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ.
ಆಟೊ ರಿಕ್ಷಾ ಸೇರಿದಂತೆ ವಾಹನಗಳು ರಸ್ತೆಗಿಳಿದಿದ್ದವು. ಆದರೆ ಅವುಗಳ ಸಂಖ್ಯೆ ಬಹಳ ಕಡಿಮೆ ಇದ್ದವು. ಕಲ್ಲುಗಳು, ಗಾಜಿನ ಚೂರುಗಳನ್ನು ತೆಗೆದು ಬೀದಿಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ನಗರಪಾಲಿಕೆ ಕಾರ್ಮಿಕರು ಆರಂಭಿಸಿದ್ದಾರೆ.