ಚೆನ್ನೈ (ಪಿಟಿಐ): ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ದೇಶದ ವಿವಿಧೆಡೆ ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹೀಗಾಗಿ ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಇಲಾಖೆ ಎಚ್ಚರಿಕೆ ನೀಡಿದೆ. ಹಿಂದೂ ಮಹಾಸಾಗರದ ಪಶ್ಚಿಮ ಭಾಗದ ಸಮಾನಂತರ ರೇಖೆ ವ್ಯಾಪ್ತಿಯಲ್ಲಿ ತೀವ್ರ ವಾಯುಭಾರ ಕುಸಿತವಾಗಿದ್ದು, ಪ್ರಬಲ ಗಾಳಿ ಬಂಗಾಳಕೊಲ್ಲಿಯತ್ತ ನುಗ್ಗಿ ಬರುತ್ತಿದೆ.
ಇದರ ಪರಿಣಾಮ ಮುಂದಿನ 12 ಗಂಟೆಗಳಲ್ಲಿ ಭಾರತದ ವಿವಿಧೆಡೆ ಚಂಡಮಾರುತ ಬೀಸಲಿದೆ. ಮುಂದಿನ 24 ಗಂಟೆಗಳಲ್ಲಿ ಇದು ಇನ್ನಷ್ಟು ತೀವ್ರವಾಗಿರುತ್ತದೆ ಎಂದು ಇಲಾಖೆ ಎಚ್ಚರಿಸಿದೆ.
ಸದ್ಯಕ್ಕೆ ಗಂಟೆಗೆ 100 ಕಿ.ಮೀಗೂ ಹೆಚ್ಚು ವೇಗದಲ್ಲಿ ಬೀಸುತ್ತಿರುವ ಗಾಳಿಯು ಕೇರಳ, ತಮಿಳುನಾಡು, ಪುದುಚೇರಿ ತೀರ ಪ್ರದೇಶವನ್ನು ಅಪ್ಪಳಿಸಲಿದೆ ಎಂದು ಇಲಾಖೆ ಹೇಳಿದೆ.