ಅಹಮದಾಬಾದ್: ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ? ಗುಜರಾತ್ನಲ್ಲಿ 9ನೇ ತರಗತಿ ವಿದ್ಯಾರ್ಥಿಗಳಿಗೆ ‘ಸುಫಲಾಂ ಶಾಲಾ ವಿಕಾಸ್ ಸಂಕುಲ’ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಶಾಲೆಗಳ ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆ ಇದು.
ಇದನ್ನು ನೋಡಿ ಶಿಕ್ಷಣ ಇಲಾಖೆ ಅಧಿಕಾರಿಗಳು ದಂಗಾಗಿದ್ದು, ತನಿಖೆ ನಡೆಸಲು ಸೂಚಿಸಿದ್ದಾರೆ.
ಇದೇ ಶಾಲೆಯ ಪಿಯುಸಿ ವಿದ್ಯಾರ್ಥಿಗಳಿಗೆ, ಮದ್ಯ ಮಾರಾಟ ಮತ್ತು ಮಾದಕ ವಸ್ತುಗಳ ಸಾಗಾಟದಾರರ ಕುರಿತುಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ದೂರು ಸಲ್ಲಿಸುವ ಪತ್ರವೊಂದನ್ನು ಬರೆಯುವಂತೆ ಸೂಚಿಸಲಾಗಿತ್ತು.
ಈ ಪ್ರಶ್ನೆಗಳು ಆಕ್ಷೇಪಾರ್ಹವಾಗಿದ್ದು, ತನಿಖೆ ಪ್ರಾರಂಭಿಸಿದ್ದೇವೆ. ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗಾಂಧಿನಗರ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿ ಭರತ್ ವಾದೆರ್ ತಿಳಿಸಿದ್ದಾರೆ.
ಪ್ರಶ್ನೆ ಪತ್ರಿಕೆಯನ್ನು ಶಾಲಾ ಆಡಳಿತ ಮಂಡಳಿಯೇ ಸಿದ್ಧಪಡಿಸಿದ್ದು, ಇದಕ್ಕೂ ರಾಜ್ಯ ಶಿಕ್ಷಣ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.