ಕೂಚ್ ಬಿಹಾರ್:‘ರಾಜ್ಯಕ್ಕಾಗಿ ಮೀಸಲಾದ ಕೇಂದ್ರದ ಹಲವು ಯೋಜನೆಗಳಿಗೆ ಬ್ರೇಕ್(ತಡೆ) ಹಾಕಿದ್ದಾರೆ’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಕೂಚ್ ಬಿಹಾರ್ನಲ್ಲಿ ಭಾನುವಾರ ಆಯೋಜಿಸಲಾದ ರ್ಯಾಲಿ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಕೇಂದ್ರದ ಹಲವು ಯೋಜನೆಗಳು ಈಗಾಗಲೇ ಬೇರೆ ರಾಜ್ಯಗಳಲ್ಲಿ ಲಭ್ಯವಿದ್ದು, ಈ ರಾಜ್ಯದ ಜನರು ಯೋಜನೆಯ ಲಾಭ ಪಡೆಯಲುತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ತಡೆ ಹಾಕಿದ್ದಾರೆ ಎಂದರು.
'ಶಾರದಾ ಹಗರಣ, ರೋಸ್ ವ್ಯಾಲಿ ಹಗರಣ ಹಾಗೂ ನಾರದಾ ಹಗರಣಗಳಿಂದ ದೀದಿ ಪಶ್ಚಿಮ ಬಂಗಾಳಕ್ಕೆ ಕೇಡುಂಟು ಮಾಡಿದ್ದಾರೆ. ಲೂಟಿ ಮಾಡಿರುವ ಪ್ರತಿ ಪೈಸೆಗೆ ಈ ಚೌಕಿದಾರ್(ಕಾವಲುಗಾರ) ಉತ್ತರ ಪಡೆಯಲಿದ್ದಾನೆ ಎಂದು ನಿಮ್ಮಲ್ಲಿ ಭರವಸೆ ನೀಡುತ್ತೇನೆ’ ಎನ್ನುವ ಮೂಲಕ ಜನರಿಂದ ಚಪ್ಪಾಳೆ ಗಿಟ್ಟಿಸಿದರು.
Great vibrancy in Cooch Behar. West Bengal is with BJP! Watch. https://t.co/l6nm7MQd05
— Chowkidar Narendra Modi (@narendramodi) April 7, 2019
ಕೂಚ್ ಬಿಹಾರದಲ್ಲಿ ರ್ಯಾಲಿಗೆ ಸೀಮಿತ ಸ್ಥಳ ನಿಗದಿ ಮಾಡಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, 'ದೊಡ್ಡ ಸಂಖ್ಯೆಯಲ್ಲಿ ಜನರು ರ್ಯಾಲಿಯಲ್ಲಿ ಭಾಗವಹಿಸುವುದನ್ನು ತಡೆಯಲು ದೀದಿ ಬಹಳಷ್ಟು ಪ್ರಯತ್ನಿಸಿದ್ದಾರೆ. ಇಂಥ ಬಾಲಿಶ ವರ್ತನೆಗಳಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದೆಂದು ಹೇಗೆ ನಿರೀಕ್ಷಿಸಿದ್ದಾರೆ?’ ಎಂದರು.
'ಚುನಾವಣಾ ಆಯೋಗದ ವಿರುದ್ಧ ಮಮತಾ ಆಕ್ರೋಶ ವ್ಯಕ್ತಪಡಿಸಿದ ರೀತಿಯಲ್ಲಿಯೇ ತಿಳಿಯುತ್ತದೆ, ಅವರು ಎಷ್ಟು ಕಂಗಾಲಾಗಿ ಹೋಗಿದ್ದಾರೆಂದು. ಬೆಂಗಾಲ್ನಲ್ಲಿ ದೀದಿ ರಾಜಕೀಯ ನೆಲೆಯನ್ನು ಕಳೆದುಕೊಳ್ಳುತ್ತಿದ್ದಾರೆ’ ಎಂದು ಮೋದಿ ಹೇಳಿದರು.
ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯುವುದಾಗಿ ಘೋಷಿಸಿದ ಬೆನ್ನಲೇ ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಅಕ್ರಮ ವಲಸಿಗರನ್ನು ಮತ ಬ್ಯಾಂಕ್ ಭದ್ರ ಮಾಡಿಕೊಳ್ಳಲು ಮಮತಾ ಬ್ಯಾನರ್ಜಿ ರಕ್ಷಿಸುತ್ತಿರುವುದಾಗಿ ಪ್ರಧಾನಿ ಮೋದಿ ಆರೋಪಿಸಿದ್ದಾರೆ. ’ಅಕ್ರಮ ವಲಸಿಗರಿಗೆ ರಕ್ಷಣೆ ಒದಗಿಸುವ ಮೂಲಕ ದೀದಿ ಕೇಂದ್ರಕ್ಕೆ ದ್ರೋಹ ಎಸಗಿದ್ದಾರೆ. ಅಕ್ರಮ ವಲಸಿಗರನ್ನು ತಡೆಯಲು ಈ ಚೌಕಿದಾರ್(ಕಾವಲುಗಾರ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ) ಮತ್ತು ಪೌರತ್ವ(ತಿದ್ದುಪಡಿ) ಮಸೂದೆಯನ್ನು ತಂದಿದ್ದಾನೆ. ಆದರೆ, ದೀದಿ ವಿರೋಧ ಪಕ್ಷಗಳ ಮೈತ್ರಿ(ಮಹಾಮಿಲಾವತ್) ಜತೆಗಾರರೊಂದಿಗೆ ಸರ್ಕಾರವನ್ನು ಕಾರ್ಯಗತಗೊಳಿಸದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ’ ಎಂದಿದ್ದಾರೆ.
ಪ್ರಧಾನಿ ಮೋದಿ ತಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನರ ಮುಂದಿಟ್ಟರು. ’ಪ್ರತಿ ಬಡ ವ್ಯಕ್ತಿಯೂ ಬ್ಯಾಂಕ್ ಖಾತೆ ಹಾಗೂ ಡೆಬಿಟ್ ಕಾರ್ಡ್ ಹೊಂದಿದ್ದಾರೆ. ಮಹಿಳೆಯರಿಗೆ ಸುಲಭವಾಗಿ ಅಡುಗೆ ಅನಿಲ ಸಂಪರ್ಕ ದೊರೆಯುತ್ತಿದೆ. ಕೆಲವು ವರ್ಷಗಳ ಹಿಂದೆ ಯಾವುದು ಅಸಾಧ್ಯವೆಂದು ತೋರಿತ್ತೋ ಅದನ್ನು ಮೋದಿ ಸರ್ಕಾರ ಸಾಧ್ಯವಾಗಿಸಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.