ಹೈದರಾಬಾದ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಗೋಮಾಂಸದ ಬಿರಿಯಾನಿ ಕಳುಹಿಸಲು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರಿಗೆ ಹೇಳುತ್ತೇನೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.
ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ರಾಜ್ಯದ ಮುಸ್ಲಿಮರಿಗೆ ಗೋಮಾಂಸದ ಬಿರಿಯಾನಿ ಕಳುಹಿಸುತ್ತಿರುವುದನ್ನು ಅಮಿತ್ ಶಾ ಪ್ರಶ್ನಿಸಿದ್ದಕ್ಕೆ ಓವೈಸಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಹೈದರಾಬಾದ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ‘ಅಮಿತ್ ಶಾ ಬಿರಿಯಾನಿ ಇಷ್ಟಪಡುತ್ತಾರೆ ಎಂಬುದು ಗೊತ್ತಿರಲಿಲ್ಲ. ಅವರಿಗೆ ‘ಕಲ್ಯಾಣಿ ಬಿರಿಯಾನಿ (ಗೋಮಾಂಸದ ಬಿರಿಯಾನಿಗೆ ಆಡುಭಾಷೆಯಲ್ಲಿ ಬಳಸುವ ಪದ)’ ಕಳುಹಿಸಲುಕೆ. ಚಂದ್ರಶೇಖರ ರಾವ್ ಅವರಿಗೆ ಹೇಳುತ್ತೇನೆ’ ಎಂದು ವ್ಯಂಗ್ಯವಾಡಿದ್ದಾರೆ.
‘ಕೆ. ಚಂದ್ರಶೇಖರ ರಾವ್ ಮುಸ್ಲಿಮರಿಗೆ ಬಿರಿಯಾನಿ ಕಳುಹಿಸುತ್ತಾರೆ ಎಂದು ಅಮಿತ್ ಶಾ ಹೇಳುತ್ತಾರೆ. ಅವರೂ ಅದನ್ನು ಇಷ್ಟಪಡುತ್ತಾರೆ ಎಂಬುದು ನನಗೆ ಗೊತ್ತಿರಲಿಲ್ಲ. ಓವೈಸಿಗೆ ಬಿರಿಯಾನಿ ಕೊಟ್ಟು ತಮಗೆ ಕೊಡದಿರುವುದಕ್ಕೆ ಅವರಿಗೆ (ಅಮಿತ್ ಶಾ) ಅಸೂಯೆ ಇದ್ದರೆ ಅವರಿಗೂಗೋಮಾಂಸದ ಬಿರಿಯಾನಿ ಪಾರ್ಸೆಲ್ ಕಳುಹಿಸಿಕೊಡಲಿದ್ದೇವೆ. ಬೇರೆ ಯಾರಾದರೂ ತಿನ್ನುತ್ತಿದ್ದರೆ ನಿಮಗೆ ಯಾಕೆ ಹೊಟ್ಟೆಯುರಿ? ನೀವೂ ತಿನ್ನಿ’ ಎಂದು ಅಮಿತ್ ಶಾ ಅವರನ್ನು ಉದ್ದೇಶಿಸಿ ಓವೈಸಿ ಹೇಳಿದ್ದಾರೆ.
ಪ್ರಧಾನಿ ಮೋದಿ ಕುರಿತೂ ವ್ಯಂಗ್ಯ: ನವಾಜ್ ಶರೀಫ್ ಪಾಕಿಸ್ತಾನದ ಪ್ರಧಾನಿಯಾಗಿದ್ದಾಗ ಅವರ ಮಗಳ ಮದುವೆಗೆ ಆಹ್ವಾನವಿಲ್ಲದೆ ತೆರಳಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಓವೈಸಿ ಕುಹಕವಾಡಿದ್ದಾರೆ. ಆಹ್ವಾನವಿಲ್ಲದೆ ಮೋದಿ ಅಲ್ಲಿಗೆ ತೆಳಿದ್ದರು. ಅಲ್ಲಿ ಅವರಿಗೆ ತಿನ್ನಲು ಏನು ಕೊಟ್ಟಿದ್ದರೋ ಗೊತ್ತಿಲ್ಲ ಎಂದು ಓವೈಸಿ ಹೇಳಿದ್ದಾರೆ.