ಪಿತೋರ್ಗಡ: ನಂದಾದೇವಿ ಪರ್ವತದ ಪೂರ್ವ ಭಾಗದಲ್ಲಿ ಭಾರತೀಯ ವಾಯುಪಡೆಯ ವಿಮಾನಗಳು ಐವರ ಚಾರಣಿಗರ ಮೃತದೇಹವನ್ನು ಪತ್ತೆಹಚ್ಚಿದ ನಂತರ ತೆಗೆಯಲು ಪಿತೋರ್ಗಡ ಜಿಲ್ಲಾಡಳಿತ ಕೇಂದ್ರದ ಸೂಚನೆಗೆ ಕಾದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾದ ಎಂಟು ಮಂದಿ ಪರ್ವತಾರೋಹಿಗಳು ಮೇ 13 ರಂದು ಕಣ್ಮರೆಯಾಗಿದ್ದರು. ಇವರು ಮೇ 25 ರಂದು ಮೂಲಶಿಬಿರಕ್ಕೆ ವಾಪಸಾಗಬೇಕಿತ್ತು.
ವಾಯುಪಡೆಯ ನೆರವಿನಿಂದ ಶೋಧ ನಡೆಸಿದಾಗ ಎಂಟು ಮಂದಿಯಲ್ಲಿ ಐವರು ಹಿಮ ಕುಸಿತದಿಂದ ಮೃತಪಟ್ಟಿರುವುದು ಸೋಮವಾರ ಪತ್ತೆಯಾಗಿತ್ತು.
‘ಮೃತದೇಹ ನೋಡಿ 30 ಗಂಟೆಗಳೇ ಆಗಿವೆ. ಇವುಗಳನ್ನು ಎತ್ತಲು ಯಾವುದೇ ರಾಯಭಾರ ಕಚೇರಿಯಿಂದ ಇಲ್ಲವೇ ಕೇಂದ್ರ ಸರ್ಕಾರದಿಂದ ಸೂಚನೆ ಬಂದಿಲ್ಲ’ ಎಂದು ಪಿತೋರ್ಗಡ ಜಿಲ್ಲಾಧಿಕಾರಿ ವಿ.ಕೆ. ಜಾಂಗಡೆ ಹೇಳಿದ್ದಾರೆ.
ಮೃತದೇಹ ತೆಗೆಯಲು ರಾಜ್ಯ ವಿಪತ್ತು ನಿರ್ವಹಣಾ ಪಡೆಯ 10 ಮಂದಿ ಚಾರಣಿಗರು ಮತ್ತು ಇಂಡೊ ಟಿಬೆಟನ್ ಗಡಿ ಪೊಲೀಸ್ನ ತಂಡವನ್ನು ಸಿದ್ಧವಿರಿಸಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದಿಂದ ಸೂಚನೆಗೆ ಕಾಯುತ್ತಿರುವುದಾಗಿ ಅವರು ಹೇಳಿದ್ದಾರೆ.
ಅನುಮತಿ ಪಡೆದಿರಲಿಲ್ಲ: ಪರ್ವತಾರೋಹಿಗಳು ಬಳಸಿದ್ದು ಪರಿಶೀಲನೆ ನಡೆಸದ ಮಾರ್ಗವಾಗಿತ್ತು. ಅಲ್ಲದೆ ಅವರು ಚಾರಣಕ್ಕೆ ಅನುಮತಿಯನ್ನೇ ಪಡೆದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಎಂಟು ಮಂದಿ ಚಾರಣಿಗರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.