ಲಖನೌ: ಉತ್ತರ ಪ್ರದೇಶದ ಹರ್ದೋಯಿ ಪಟ್ಟಣದಲ್ಲಿನ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಮುಖಂಡರೊಬ್ಬರು ಆಯೋಜಿಸಿದ್ದ ಸಭೆಯಲ್ಲಿ ಆಹಾರದ ಪೊಟ್ಟಣದೊಳಗೆ ಮದ್ಯದ ಬಾಟಲಿಯನ್ನೂ ಇಟ್ಟು ವಿತರಿಸಲಾಗಿದೆ. ಇದರ ಫೋಟೊಗಳು ಹಾಗೂ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಬಿಜೆಪಿಯ ಹಿರಿಯ ಮುಖಂಡ ನರೇಶ್ ಅಗರವಾಲ್ ಅವರ ಪುತ್ರ, ಸಚಿವ ನಿತಿನ್ ಅಗರವಾಲ್ ಅವರು ಪಾಸಿ ಸಮುದಾಯದವರಿಗಾಗಿ (ಪರಿಶಿಷ್ಟ ಜಾತಿಯ) ಶ್ರವಣ ದೇವಿ ದೇವಸ್ಥಾನದಲ್ಲಿ ಈ ಸಭೆಯನ್ನು ಭಾನುವಾರ ಆಯೋಜಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಪೂರಿ ಮತ್ತು ಸಬ್ಜಿಯಿದ್ದ ಪೊಟ್ಟಣದಲ್ಲಿ ಮದ್ಯವನ್ನೂ ಕಂಡ ಜನ ತಮ್ಮ ಕಣ್ಣುಗಳನ್ನು ತಾವೇ ನಂಬದಾದರು. ‘ತಿಂಡಿ ಪೊಟ್ಟಣಗಳನ್ನು ಗ್ರಾಮದ ಮುಖ್ಯಸ್ಥರಿಗೆ ನೀಡಲಾಗುತ್ತಿದೆ. ಅವರು ಪೊಟ್ಟಣಗಳನ್ನು ಪಡೆದುಕೊಂಡು ತಮ್ಮ ಜನರಿಗೆ ಹಂಚಬೇಕು’ ಎಂದು ನಿತಿನ್ ಅವರು ವೇದಿಕೆ ಮೇಲಿನಿಂದ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.