ರಾಜ್ಯದ 156 ತಾಲ್ಲೂಕುಗಳು ಬರಪೀಡಿತವಾಗಿವೆ. ಈ ಪೈಕಿ 107 ತಾಲ್ಲೂಕುಗಳಲ್ಲಿ ತೀವ್ರ ಬರದ ಸ್ಥಿತಿಯಿದೆ. 19.46 ಲಕ್ಷ ಹೆಕ್ಟೇರುಗಳ 23,313 ಕೋಟಿ ರುಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ. 2018ರಲ್ಲಿ ನೆರೆ-ಬರದ ಕಾರಣ ಒಟ್ಟು 32,335 ಕೋಟಿ ರುಪಾಯಿಗಳಷ್ಟು ನಷ್ಟವಾಗಿದ್ದು, ರಾಜ್ಯದ ಹಣಕಾಸು ಪರಿಸ್ಥಿತಿ ತೀವ್ರ ಒತ್ತಡ ಎದುರಿಸಿದೆ. ಕೃಷ್ಣಾ ಮತ್ತು ಕಾವೇರಿ ಜಲಾಶಯಗಳ ನೀರಿನ ಸಂಗ್ರಹ ಇದೇ ಜನವರಿ ಅಂತ್ಯದ ವೇಳೆಗೆ ಅನುಕ್ರಮವಾಗಿ ಕೇವಲ ಶೇ.38 ಮತ್ತು ಶೇ.44ರ ಪ್ರಮಾಣಕ್ಕೆ ಕುಸಿದಿದೆ. ಈ ನೀರನ್ನು ಕುಡಿಯುವ ಬಳಕೆಗಷ್ಟೇ ಸೀಮಿತಗೊಳಿಸಲಾಗಿದೆ. 3,611 ಸಣ್ಣ ನೀರಾವರಿ ಕೆರೆಗಳ ಪೈಕಿ ಶೇ.48ರಷ್ಟು ಕೆರೆಗಳು ಅಷ್ಟಿಷ್ಟು ನೀರು ನಿಂತಿದೆ ಇಲ್ಲವೇ ಪೂರ್ಣ ಒಣಗಿ ಹೋಗಿವೆ.