ಯವತ್ಮಲ್, ಮಹಾರಾಷ್ಟ್ರ: ಸಿಆರ್ಪಿಎಫ್ ಯೋಧರ ಬಲಿದಾನವು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪುನರುಚ್ಚರಿಸಿದ್ದಾರೆ. ದಾಳಿ ಎಸಗಿದ ತಪ್ಪಿತಸ್ಥರಿಗೆ ತಿರುಗೇಟು ನೀಡಲು ಸೇನೆಗೆ ಎಲ್ಲ ಸ್ವಾತಂತ್ರ್ಯವನ್ನೂ ನೀಡಲಾಗಿದೆ ಎಂದು ಅವರು ಹೇಳಿದರು.
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು. ‘ಭಯೋತ್ಪಾದನೆಗೆ ಪಾಕಿಸ್ತಾನ ಎಂಬ ಪದವೇ ಸಮಾನಾರ್ಥಕ. ಪಾಕಿಸ್ತಾನವು ಭಯೋತ್ಪಾದನೆಗೆ ಎರಡನೇ ಹೆಸರು’ ಎಂದು ಆರೋಪಿಸಿದರು.
‘ಹುತಾತ್ಮ ಯೋಧರ ಕುಟುಂಬದ ಸಂಕಟವನ್ನು ನಾವೆಲ್ಲ ಊಹಿಸಬಲ್ಲೆವು. ನಿಮ್ಮ ಆಕ್ರೋಶ ನಮಗೆ ಅರ್ಥವಾಗಿದೆ’ ಎಂದು ಜನರನ್ನು ಉದ್ದೇಶಿಸಿ ಅವರು ನುಡಿದರು.
ಹುರಿಯತ್ ನಾಯಕರ ಭದ್ರತೆ ವಾಪಸ್?
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ನೀಡುತ್ತಿರುವ ಭದ್ರತೆ ಹಿಂಪಡೆಯುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರತ್ಯೇಕತಾವಾದಿ ಹುರಿಯತ್ ಮುಖಂಡರಾದ ಸೈಯದ್ ಅಲಿ ಗಿಲಾನಿ, ಮಿರ್ವೈಜ್ ಉಮರ್ ಫಾರೂಕ್ ಮತ್ತು ಯಾಸಿನ್ ಮಲಿಕ್ ಅವರಿಗೆ ಸರ್ಕಾರ ಭದ್ರತೆ ಒದಗಿಸಿದೆ.
ಪಾಕಿಸ್ತಾನ ಹಾಗೂ ಗುಪ್ತಚರ ಸಂಸ್ಥೆ ಐಎಸ್ಐ ಪರ ಕೆಲಸ ಮಾಡುತ್ತಿರುವ ಹುರಿಯತ್ ನಾಯಕರಿಗೆ ಭದ್ರತೆ ಹಿಂಪಡೆಯುವ ಕುರಿತು ಪರಿಶೀಲನೆ ನಡೆಸುವಂತೆ ಕೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.