ನವದೆಹಲಿ:ಭಾರತ–ನೇಪಾಳ ಗಡಿ ಪ್ರದೇಶದ ಬಳಿ ಅರಣ್ಯ ಭಾಗದಲ್ಲಿ ಮಂಗಳವಾರ ಸಂಜೆ ಲಘು ಭೂಕಂಪ ಸಂಭವಿಸಿದೆ. ಪರಿಣಾಮವಾಗಿ ದೆಹಲಿ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಕೆಲವೆಡೆಗಳಲ್ಲಿಯೂ ಭೂಮಿ ಕಂಪಿಸಿದೆ.
ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.3ರಷ್ಟಿತ್ತು. ಸ್ಥಳೀಯ ಕಾಲಮಾನ ಪ್ರಕಾರ ಸಂಜೆ 7.30 ಸುಮಾರಿಗೆ ಭೂಮಿ ಕಂಪಿಸಿದೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ನೇಪಾಳದ ಖಪ್ತಾಡ್ ರಾಷ್ಟ್ರೀಯ ಉದ್ಯಾನದ ಬಳಿ 1.3 ಕಿ.ಮೀ ಆಳದಲ್ಲಿ ಕಂಪನ ಕೇಂದ್ರ ದಾಖಲಾಗಿದೆ.
ಅದೃಷ್ಟವಶಾತ್, ಸಾವು–ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ.
2015ರಲ್ಲಿ ನೇಪಾಳದಲ್ಲಿ ಸಂಭವಿಸಿದ್ದ ಭಾರಿ ಭೂಕಂಪದಲ್ಲಿ ಸುಮಾರು 9,000 ಜನ ಮೃತಪಟ್ಟಿದ್ದರು.