ನವದೆಹಲಿ: ಕರ್ನಾಟಕದ ನಾಲ್ಕು ನಗರಗಳೂ ಸೇರಿ ದೇಶದ 102 ನಗರಗಳಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಗುರುವಾರ ಚಾಲನೆ ನೀಡಿದೆ.
ಬೆಂಗಳೂರು, ದಾವಣಗೆರೆ, ಕಲಬುರ್ಗಿ ಮತ್ತು ಹುಬ್ಬಳ್ಳಿ–ಧಾರವಾಡ ಈ ಕಾರ್ಯಕ್ರಮಕ್ಕೆ ಆಯ್ಕೆಯಾಗಿವೆ.
ಈ 102 ನಗರಗಳಲ್ಲಿ 43 ‘ಸ್ಮಾರ್ಟ್ ಸಿಟಿ’ಗಳೂ ಸೇರಿವೆ.2017ರಲ್ಲಿ ಈ ನಗರಗಳಲ್ಲಿ ದಾಖಲಾಗಿದ್ದ ಪಿಎಂ 2.5 ಮತ್ತು ಪಿಎಂ 10 ಮಾಲಿನ್ಯಕಾರಕ ಕಣಗಳ ಸಂಖ್ಯೆಯಲ್ಲಿ ಶೇ 20–30ರಷ್ಟು ಕಡಿಮೆ ಮಾಡಲು ಈ ಕಾರ್ಯಕ್ರಮ ರೂಪಿಸಲಾಗಿದೆ. 2019ರಿಂದ 2024ರವರೆಗೆ ಕಾರ್ಯಕ್ರಮ ಚಾಲ್ತಿಯಲ್ಲಿ ಇರಲಿದೆ. ಕೇಂದ್ರ ಪರಿಸರ ಸಚಿವಾಲಯ ಇದರ ಮೇಲ್ವಿಚಾರಣೆ ನಡೆಸಲಿದೆ.
ಐದು ವರ್ಷಗಳ ಈ ಕಾರ್ಯಕ್ರಮಕ್ಕೆ ₹ 2,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಈಗ ₹ 300 ಕೋಟಿ ಮಂಜೂರು ಮಾಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.\
ದೂಳು ನಿಯಂತ್ರಣಕ್ಕೆ ಕ್ರಮಗಳು ಈ ನಗರಗಳಲ್ಲಿ ದೂಳಿನ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ವಾಯುಮಾಲಿನ್ಯವನ್ನು ನಿಯಂತ್ರಿಸಲು ಯೋಜನೆ ರೂಪಿಸಲಾಗಿದೆ. ಆಯಾ ನಗರಗಳಿಗೇ ವಿಶಿಷ್ಟವಾದ ಕಾರ್ಯಯೋಜನೆ ರೂಪಿಸಬೇಕಿದೆ. ಆದರೆ ಪ್ರಮುಖವಾಗಿ ಈ ಕೆಳಕಂಡ ಕ್ರಮಗಳನ್ನು ಸೂಚಿಸಲಾಗಿದೆ
* ರಸ್ತೆಯಲ್ಲಿ ದೂಳು ಏಳದಂತೆ ನೀರು ಚಿಮುಕಿಸುವುದು * ನಿರ್ಮಾಣ–ಕಾಮಗಾರಿ ಸ್ಥಳಗಳಲ್ಲಿ ನೀರು ಚಿಮುಕಿಸುವುದು * ಸಂಸ್ಕರಿಸಿದ ಕೊಳಚೆ ನೀರನ್ನು ಇದಕ್ಕಾಗಿ ಬಳಸುವುದು * ರಸ್ತೆಯ ಕಸ ಗುಡಿಸಲು ಯಂತ್ರಗಳನ್ನು ಬಳಸುವುದು * ಎಲ್ಲಾ ರಸ್ತೆಗಳಲ್ಲಿ ಗಿಡ–ಮರಗಳನ್ನು ಬೆಳೆಸುವುದು