ಲಖನೌ: ‘ವಿದ್ಯುನ್ಮಾನ ಮತ ಯಂತ್ರವನ್ನು (ಇವಿಎಂ) ಬಿಜೆಪಿ ದುರುಪಯೋಗ ಪಡಿಸಿಕೊಂಡಿರುವುದರಿಂದ ಚುನಾವಣೆಯಲ್ಲಿ ಸೋಲಾಗಿದೆ. ಹೀಗಾಗಿ ಕಾರ್ಯಕರ್ತರು ನಿರಾಶರಾಗುವ ಅಗತ್ಯವಿಲ್ಲ’ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಶುಕ್ರವಾರ ಹೇಳಿದರು.
ಹಮೀರ್ಪುರ ವಿಧಾನಸಭಾ ಉಪಚುನಾಣೆಯಲ್ಲಿ ಬಿಎಸ್ಪಿ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಯುವರಾಜ್ ಸಿಂಗ್ ಅವರು ಸಮಾಜವಾದಿ ಪಕ್ಷದ ಮನೋಜ್ ಪ್ರಜಾಪತಿ ವಿರುದ್ಧ 17,846 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಶಾಸಕರಾಗಿದ್ದ ಅಶೋಕ್ಕುಮಾರ್ ಸಿಂಗ್ ಚಾಂದೆಲ್ಗೆ ಕೊಲೆ ಪ್ರಕ ರಣದಲ್ಲಿ ಶಿಕ್ಷೆಯಾಗಿ ಶಾಸಕತ್ವ ರದ್ದಾಗಿದ್ದರಿಂದ ಉಪಚುನಾವಣೆ ನಡೆದಿತ್ತು.
ಸಿಂಗ್ 74,374 ಮತಗಳನ್ನು ಪಡೆದಿದ್ದು, ಪ್ರಜಾಪತಿ 56,528 ಮತಗಳನ್ನು ಗಳಿಸಿದ್ದಾರೆ. ಬಿಎಸ್ಪಿ ಅಭ್ಯರ್ಥಿ ನೌಶಾದ್ ಅಲಿ 28,790 ಮತಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
‘ಇವಿಎಂಗಳನ್ನು ದುರುಪಯೋಗಪಡಿಸಿ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಬಿಜೆಪಿಯ ಪ್ರವೃತ್ತಿ ಹಮೀರ್ಪುರ ಉಪಚುನಾವಣೆಯಲ್ಲಿಯೂ ಮುಂದುವರಿದಿದೆ. ಮಳೆಯಿಂದಾಗಿ ಅವರ ಮತದಾರರು ಹೊರಗೆ ಬಂದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ.ಎಂದು ಟ್ವೀಟ್ ಮಾಡಿದ್ದಾರೆ.