ನವದೆಹಲಿ: ದೆಹಲಿಯ ಲ್ಯುಥೆನ್ಸ್ ಪ್ರದೇಶದ ಸರ್ಕಾರಿ ಬಂಗಲೆಗಳಲ್ಲಿರುವ ಮಾಜಿ ಸಂಸದರು ಒಂದು ವಾರದೊಳಗೆ ಈ ನಿವಾಸಗಳನ್ನು ಖಾಲಿ ಮಾಡಬೇಕು ಎಂದು ಲೋಕಸಭೆಯ ವಸತಿ ಸಮಿತಿ ಸೋಮವಾರ ಆದೇಶಿಸಿದೆ.
ಸಂಸತ್ ಸದಸ್ಯತ್ವದ ಅವಧಿ ಮುಗಿದು ಮಾಜಿಯಾಗಿದ್ದರೂ ಇನ್ನೂ ಸರ್ಕಾರಿ ಬಂಗಲೆಗಳಲ್ಲಿಯೇ ಇದ್ದಾರೆ. 200ಕ್ಕೂ ಹೆಚ್ಚು ಮಾಜಿ ಸಂಸದರು ಸರ್ಕಾರಿ ಬಂಗಲೆಗಳನ್ನು ಇನ್ನೂ ಖಾಲಿ ಮಾಡಿಲ್ಲ ಎಂಬ ವರದಿ ಬಂದ ನಂತರ ಸಮಿತಿ ಈ ಕ್ರಮಕ್ಕೆ ಮುಂದಾಗಿದೆ.
ಲೋಕಸಭೆ ವಸತಿ ಸಮಿತಿ ಅಧ್ಯಕ್ಷ ಸಿ.ಆರ್.ಪಾಟೀಲ್ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೂರು ದಿನದೊಳಗೆ ಇಂಥ ಬಂಗಲೆಗಳಿಗೆ ವಿದ್ಯುತ್, ನೀರು ಮತ್ತು ಅಡುಗೆ ಅನೀಲ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಲಾಗಿದೆ.
‘ಮಾಜಿ ಸಂಸದರಿಗೆ ಸರ್ಕಾರಿ ಬಂಗಲೆ ಖಾಲಿ ಮಾಡಲು ಆದೇಶಿಸಲಾಗಿದೆ. ಈ ಕುರಿತು ಮಾಜಿ ಸಂಸದರ್ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ’ ಎಂದು ಪಾಟೀಲ್ ತಿಳಿಸಿದ್ದಾರೆ.
ಆಯಾ ಅವಧಿಯ ಲೋಕಸಭೆ ವಿಸರ್ಜನೆಯಾಗುತ್ತಿದ್ದಂತೆಯೇ ಮಾಜಿ ಸಂಸದರು ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡಬೇಕು ಎಂಬ ನಿಯಮವಿದೆ. ಆದರೆ, 2014ರಲ್ಲಿ ಆಯ್ಕೆಯಾಗಿ ಸರ್ಕಾರಿ ಬಂಗಲೆ ಪಡೆದಿದ್ದ 200ಕ್ಕೂ ಹೆಚ್ಚು ಮಾಜಿ ಸಂಸದರು ಖಾಲಿ ಮಾಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.