ನವದೆಹಲಿ: ದೆಹಲಿಯ ಲ್ಯುಟೆನ್ಸ್ ಪ್ರದೇಶದಲ್ಲಿರುವ ವಿಠ್ಠಲ್ ಭಾಯಿ ಪಟೇಲ್ ಹೌಸ್ ಅನ್ನು ಖಾಲಿ ಮಾಡುವಂತೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ಕೇಂದ್ರ ಸರ್ಕಾರ ಶನಿವಾರ ಹೇಳಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಪ್ರಧಾನಿಯಾಗಿರುವುದರಿಂದ ದೇವೇಗೌಡ ಅವರಿಗೆ ಅಧಿಕೃತ ನಿವಾಸವಾಗಿರುವ ಸಫ್ದರ್ಜಂಗ್ ಲೇನ್ ಬಂಗಲೆಯಲ್ಲಿ ವಾಸವಿರಲು ಅವಕಾಶ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
‘ಕಳೆದ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ದೇವೇಗೌಡರು, ಬಹಳ ವರ್ಷಗಳಿಂದ ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸದ ಜೊತೆಗೆ ಪಟೇಲ್ ಹೌಸ್ನ್ನು ಅತಿಥಿಗೃಹವನ್ನಾಗಿ ಮಾಡಿಕೊಂಡಿದ್ದರು’ ಎಂದು ಮೂಲಗಳು ತಿಳಿಸಿವೆ.
ಲೋಕಸಭೆಗೆ ಚುನಾವಣೆ ನಡೆದ ನಂತರ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ತಿಂಗಳೊಳಗೆ ಮಾಜಿ ಸಂಸದರು ಅಧಿಕೃತ ನಿವಾಸಗಳನ್ನು ಖಾಲಿ ಮಾಡಬೇಕು ಎಂಬ ನಿಯಮವಿದೆ. ಇನ್ನೂ 25 ಮಂದಿ ಮಾಜಿ ಸಂಸದರು ತಮ್ಮ ಅಧಿಕೃತ ನಿವಾಸಗಳನ್ನು ಖಾಲಿ ಮಾಡಬೇಕಿದೆ.