ಕೊರೊನಾ: ಪ್ಲಾಸ್ಮಾ ಚಿಕಿತ್ಸೆ ಜಾದೂ ಮಾಡದು, ಹೆಚ್ಚಿನ ಪ್ರಯೋಗ ಅಗತ್ಯ ಎಂದ ತಜ್ಞರು

ನವದೆಹಲಿ: ಕೋವಿಡ್–19 ಗುಣಪಡಿಸುವಲ್ಲಿ ಪ್ಲಾಸ್ಮಾ ಚಿಕಿತ್ಸೆ ಜಾದೂ ಮಾಡದು. ಈ ಚಿಕಿತ್ಸಾ ವಿಧಾನದ ಪರಿಣಾಮದ ಬಗ್ಗೆ ಇನ್ನಷ್ಟು ಪ್ರಯೋಗಗಳು ಅಗತ್ಯ ಎಂದು ವೈದ್ಯಕೀಯ ಕ್ಷೇತ್ರದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕೆಲವು ರಾಜ್ಯಗಳಲ್ಲಿ ಕೋವಿಡ್–19 ಚಿಕಿತ್ಸೆಗೆ ಪ್ಲಾಸ್ಮಾ ಚಿಕಿತ್ಸೆ ಬಳಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ, ಕೋವಿಡ್–19ನಿಂದ ಗುಣಮುಖರಾಗಿರುವ ರೋಗಿಗಳ ರಕ್ತದಿಂದ ರೋಗನಿರೋಧಕ ಕಣಗಳನ್ನು (ಆ್ಯಂಟಿಬಾಡಿಸ್) ತೆಗೆದು, ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿರುವ ರೋಗಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಇದರಿಂದ ರೋಗಿಯ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಚಿಕಿತ್ಸೆ ಕೇವಲ ಪ್ರಾಯೋಗಿಕವಷ್ಟೇ, ಇದರಿಂದ ಅಪಾಯವೂ ಎದುರಾಗಬಹುದು ಎಂದು ಕಳೆದ ವಾರವಷ್ಟೇ ಕೇಂದ್ರ ಆರೋಗ್ಯ ಸಚಿವಾಲಯವು ಎಚ್ಚರಿಸಿತ್ತು.
ಇದನ್ನೂ ಓದಿ: ಕೊರೊನಾಗೆ ವಿವೇಚನಾರಹಿತವಾಗಿ ಪ್ಲಾಸ್ಮಾ ಚಿಕಿತ್ಸೆ ಸಲ್ಲ: ಕೇಂದ್ರ ಎಚ್ಚರಿಕೆ
ಹೀಗಿದ್ದರೂ, ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಕೆಲ ರಾಜ್ಯಗಳು ಪ್ಲಾಸ್ಮಾ ಚಿಕಿತ್ಸೆ ಮುಂದುವರಿಸುತ್ತಿವೆ. ‘ಈ ಚಿಕಿತ್ಸೆಯಿಂದ ಕೋವಿಡ್–19 ಚಿಕಿತ್ಸಾ ಪದ್ಧತಿಯಲ್ಲಿ ಹೆಚ್ಚಿನ ಬದಲಾವಣೆಯಾಗುತ್ತದೆ ಎಂದು ನಿರೀಕ್ಷಿಸುವುದು ತಪ್ಪು. ಈವರೆಗೆ ಕೆಲವೇ ಪ್ರಯೋಗಗಳು ನಡೆದಿದ್ದು, ಕೆಲವು ರೋಗಿಗಳಷ್ಟೇ ಚೇತರಿಸಿಕೊಂಡಿದ್ದಾರೆ’ ಎಂದು ದೆಹಲಿ ಏಮ್ಸ್ನ ನಿರ್ದೇಶಕ ರಣ್ದೀಪ್ ಗುಲೇರಿಯಾ ತಿಳಿಸಿದ್ದಾರೆ.
‘ಪ್ಲಾಸ್ಮಾ ವಿಧಾನವು ಚಿಕಿತ್ಸೆಯ ಒಂದು ಭಾಗವಷ್ಟೇ. ಇದರಿಂದ ರೋಗಿಯ ರೋಗನಿರೋಧಕ ಶಕ್ತಿ ಹೆಚ್ಚಾಗಿ, ವೈರಸ್ಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ಆದರೆ ಈ ಚಿಕಿತ್ಸೆ ಪಡೆದ ತಕ್ಷಣವೇ ಸೋಂಕು ಗುಣಮುಖವಾಗುತ್ತದೆ ಎಂದಲ್ಲ’ ಎಂದೂ ಅವರು ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.