ಫಾರುಖಾಬಾದ್: ಒತ್ತೆಯಾಳುಗಳಾಗಿದ್ದ 23 ಮಕ್ಕಳನ್ನು ಎಂಟು ಗಂಟೆಗಳ ಸತತ ಪ್ರಯತ್ನದ ನಂತರ ಬಿಡುಗಡೆಗೊಳಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.
ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದ ಸುಭಾಶ್ ಎಂಬಾತನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆತನ ಪತ್ನಿತಪ್ಪಿಸಿಕೊಳ್ಳಲು ಮುಂದಾದಾಗ ಗ್ರಾಮಸ್ಥರು ಕಲ್ಲುಗಳಿಂದ ಥಳಿಸಿದರು. ತಲೆಗೆ ಗಂಭೀರವಾದ ಪೆಟ್ಟುಬಿದ್ದ ಪರಿಣಾಮ ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಗುರುವಾರ ಆಕೆಸಾವನ್ನಪ್ಪಿದ್ದರು.
ಇಲ್ಲಿನ ಕಸಾರಿಯಾ ಗ್ರಾಮದಲ್ಲಿ ಸುಭಾಶ್ ಭಾತಮ್ ಎನ್ನುವ ವ್ಯಕ್ತಿ ಗುರುವಾರ (ಜನವರಿ 30) ಸಂಜೆ ವೇಳೆಗೆ 23 ಮಕ್ಕಳನ್ನು ತನ್ನ ಮನೆಯಲ್ಲಿ ಬಂದಿಯಾಗಿ ಮಾಡಿಕೊಂಡಿದ್ದ. ತನ್ನ ಮಗಳ ಜನ್ಮದಿನದ ಸಂಭ್ರಮಾಚರಣೆಗಾಗಿ ಗ್ರಾಮದ 6 ತಿಂಗಳು ಮಗುವಿನಿಂದ ಹಿಡಿದು 15 ವರ್ಷದ ಮಕ್ಕಳನ್ನು ಆತ ತನ್ನ ಮನೆಗೆ ಕರೆದಿದ್ದ.
ಎಷ್ಟು ಹೊತ್ತಾದರೂ ಮನೆಗೆ ಮರಳದ ಮಕ್ಕಳ ಬಗ್ಗೆ ಕಳವಳಗೊಂಡ ಪೋಷಕರು, ಸುಭಾಷ್ ಮನೆ ಬಳಿ ಬಂದು ನೋಡಿದಾಗ, ಮಕ್ಕಳನ್ನು ಬಂಧಿಸಿ ಇಟ್ಟುಕೊಂಡಿರುವ ವಿಷಯ ತಿಳಿದುಬಂತು. ನಂತರ, ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
‘ಸುಭಾಷ್, ಮಾನಸಿಕ ಸ್ಥಿಮಿತ ಇಲ್ಲದವನಾಗಿದ್ದ ಎನಿಸುತ್ತದೆ. ಆತನೊಂದಿಗೆ ನಾವು ಮಾತನಾಡಲು ಪ್ರಯತ್ನ ನಡೆಸಿದೆವು. ಆದರೆ, ಆತ ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದ. ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ’ ಎಂದು ಪೊಲೀಸ್ ಮಹಾನಿರ್ದೇಶಕ ಒ.ಪಿ. ಸಿಂಗ್ ಹೇಳಿದ್ದಾರೆ.
ಆತ ಕೊಲೆ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗೆ ಬಂದಿದ್ದ ಎಂದೂ ಹೇಳಿದ್ದಾರೆ.
***
ಒತ್ತೆಯಾಳಾಗಿದ್ದ ಎಲ್ಲಾ ಮಕ್ಕಳನ್ನು ಬಿಡುಗಡೆಗೊಳಿಸುವಲ್ಲಿ ಪೊಲೀಸರ ಯೋಜನೆ ಮತ್ತು ಕಾರ್ಯತಂತ್ರ ಶ್ಲಾಘನೀಯ