ನವದೆಹಲಿ: ನಗರದ ವಸಂತ್ ಕುಂಜ್ ಪ್ರದೇಶದ ತೋಟದಮನೆಯೊಂದರಲ್ಲಿ 50 ವರ್ಷದ ಮಾಲಾ ಲಖಾನಿ ಹಾಗೂ ಮನೆಕೆಲಸದಾಕೆ ಬಹದ್ದೂರ್ (50) ಕೊಲೆಯಾಗಿರುವಘಟನೆ ಬುಧವಾರ ರಾತ್ರಿ ನಡೆದಿದೆ.
ಮಾಲಾ ಅವರ ಕೆಲಸಗಾರ ರಾಹುಲ್, ರೆಹಮಾತ್ ಹಾಗೂ ಬಶೀರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಮಾಲಾಗ್ರೀನ್ ಪಾರ್ಕ್ನಲ್ಲಿ ಬಟ್ಟೆ ಹೊಲಿಗೆ ಅಂಗಡಿಯೊಂದನ್ನು ನಡೆಸುತ್ತಿದ್ದು, ರಾಹುಲ್ ಅದರಲ್ಲಿ ಕೆಲಸಗಾರನಾಗಿದ್ದ. ರೆಹಮಾತ್ ಹಾಗೂ ಬಶೀರ್ ಕೂಡ ಟೈಲರ್ಗಳಾಗಿ ಕೆಲಸ ಮಾಡುತ್ತಿದ್ದರು. ಇವರು ಬುಧವಾರ ರಾತ್ರಿ 10 ಗಂಟೆಗೆ ಹಣ ಪಾವತಿ ವಿಚಾರವಾಗಿ ಮಾಲಾ ಅವರೊಂದಿಗೆ ವಾಗ್ವಾದ ನಡೆಸಿದ್ದರು.
ಇದೇ ವೇಳೆ ಮೂವರು ಸೇರಿ ಮಾಲಾ ಹಾಗೂ ಬಹದ್ದೂರ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಬಳಿಕ ಆರೋಪಿಗಳು ಮಾಲಾ ಅವರ ಹೋಂಡಾ ಸಿಟಿ ಕಾರಿನಲ್ಲಿ ಪರಾರಿಯಾಗಿದ್ದರು. ರಾತ್ರಿ 1.30 ಗಂಟೆಗೆ ವಸಂತ್ ಕುಂಜ್ ಪೊಲೀಸ್ ಠಾಣೆಗೆ ತೆರಳಿದ ಆರೋಪಿಗಳು ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದರು.