ಅಹಮದಾಬಾದ್: ನಾಲ್ವರು ಮಕ್ಕಳನ್ನು ಅಪಹರಿಸಿದ ಆರೋಪ ಸಂಬಂಧ ಸ್ವಾಮಿ ನಿತ್ಯಾನಂದ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಈ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಬಳಸಿಕೊಂಡು ಯೋಗಿಣಿ ಸರ್ವಜ್ಞಪೀಠ ಆಶ್ರಮದ ಚಟುವಟಿಕೆಗಳಿಗೆ ದೇಣಿಗೆ ಸಂಗ್ರಹಿಸಲಾಗುತ್ತಿತ್ತು. ನಿತ್ಯಾನಂದನ ಇಬ್ಬರು ಶಿಷ್ಯೆಯರಾದ ಸಾಧ್ವಿ ಪ್ರಾಣಪ್ರಿಯಾನಂದ ಹಾಗೂ ಪ್ರಿಯತತ್ವ ರಿಧಿ ಕಿರಣ್ ಈ ಆಶ್ರಮದ ನಿರ್ವಹಣೆ ಹೊಣೆ ಹೊತ್ತಿದ್ದರು. ಮಕ್ಕಳ ಅಪಹರಣ ಆರೋಪದಡಿ ಇವರನ್ನೂ ಸಹ ಬಂಧಿಸಲಾಗಿದೆ.
‘ಆಶ್ರಮದಲ್ಲಿ ಬಾಲಕಾರ್ಮಿಕರಾಗಿದ್ದ 9 ಹಾಗೂ 10 ವರ್ಷದ ಇಬ್ಬರು ಮಕ್ಕಳು, ಕಳೆದ 10 ದಿನಗಳಿಂದ ತಮ್ಮನ್ನು ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡು ಹಿಂಸೆ ನೀಡಲಾಗಿದೆ ಎಂದು ತಿಳಿಸಿದರು. ಇದಾದ ಬಳಿಕ ಇವರನ್ನು ಬಂಧಿಸಲಾಯಿತು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ರಕ್ಷಿಸಲಾದ ಇಬ್ಬರು ಮಕ್ಕಳನ್ನು, ಮಕ್ಕಳ ಅಭಿವೃದ್ಧಿ ಸಮಿತಿಗೆ ಹಸ್ತಾಂತರಿಸಲಾಗಿದೆ. ಪೋಷಕರನ್ನು ಪತ್ತೆ ಮಾಡಲು ಯತ್ನಿಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.