ನವದೆಹಲಿ: ಭಾರತದ ಬಡವರ ಆದಾಯ 2022ರ ವೇಳೆಗೆ ದ್ವಿಗುಣಗೊಳ್ಳಲು ಆಡು ಸಾಕಾಣಿಕೆ ನೆರವಾಗಬಲ್ಲದು ಎಂದು ವಿಶ್ವಸಂಸ್ಥೆಯ ಕೃಷಿ ಅಭಿವೃದ್ಧಿ ಅಂತರರಾಷ್ಟ್ರೀಯ ನಿಧಿಯ(ಐಎಫ್ಎಡಿ) ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಗ್ರಾಮೀಣ ಪ್ರದೇಶಗಳಲ್ಲಿ ಆಡುಸಾಕಾಣಿಕೆ ಹೆಚ್ಚಿಸುವ ಬಗೆ’ ಎಂಬ ವಿಷಯದ ಕುರಿತು ನವದೆಹಲಿಯಲ್ಲಿ ಸೋಮವಾರ ಆಯೋಜಿಸಿದ್ದ ವಿಚಾರ–ಸಂಕಿರಣದಲ್ಲಿ ಈ ಅಭಿಪ್ರಾಯವನ್ನು ತಜ್ಞರು ಮಂಡಿಸಿದ್ದಾರೆ.
ಬಡವರು ಹಾಗೂ ಆದಿವಾಸಿಗಳ ಆದಾಯ ಹೆಚ್ಚಳ ಮತ್ತು ಅವರಿಗೆ ಬೇಕಾದ ಪೋಷಕಾಂಶಯುಕ್ತ ಆಹಾರ ಪಡೆಯಲು ಆಡುಸಾಕಣೆ ನೆರವಾಗಲಿದೆ.
ಈ ಸಂಗೋಪನೆ ಅತಿ ಕಡಿಮೆ ಬಂಡವಾಳವನ್ನು ಬೇಡುತ್ತದೆ. ಆಡುಗಳು ಹೆಚ್ಚು ಮರಿಗಳನ್ನು ಹಾಕುತ್ತವೆ. ಅಲ್ಲದೇ ಅವು ಬರಪ್ರದೇಶದಲ್ಲಿಯೂ ಹೆಚ್ಚುಕಾಲ ಬದುಕುಳಿಯುವ ಸಾಮರ್ಥ್ಯ ಹೊಂದಿರುವುದರಿಂದ ಸಾಕಾಣೆದಾರರಿಗೆ ಹೆಚ್ಚು ಹೊರೆಯಾಗಲಾರದು ಎಂದು ಐಎಫ್ಎಡಿ ಹೇಳಿಕೆಯಲ್ಲಿ ತಿಳಿಸಿದೆ.
ಆಡುಗಳ ಸಾಕಾಣಿಕೆಯಿಂದ ಬಡತನ ಪ್ರಮಾಣ ಇಳಿಕೆ, ಆದಾಯ ಹೆಚ್ಚಳದೊಂದಿಗೆ ಮಾರುಕಟ್ಟೆಯಲ್ಲಿನ ಮಾಂಸದ ಬೇಡಿಕೆಯನ್ನು ಸರಿದೂಗಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.