ನವದೆಹಲಿ: ತೆಲಂಗಾಣದ ವಲಯ ಅರಣ್ಯಾಧಿಕಾರಿ ಸಿ. ಅನಿತಾ ಅವರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದ ವಿಚಾರಣೆಯನ್ನು ಜುಲೈ 19ರಂದು ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ತೆಲಂಗಾಣದ ಆಡಳಿತಾರೂಢ ಟಿಆರ್ಎಸ್ ಶಾಸಕನ ಸೋದರನ ನೇತೃತ್ವದ ಗುಂಪು ಅನಿತಾ ಅವರ ಮೇಲೆ ಜೂನ್ 30ರಂದು ಹಲ್ಲೆ ನಡೆಸಿತ್ತು. ಆರೋಪಿಗಳಾದ ಕೊನೇರು ಕೃಷ್ಣ ರಾವ್ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿತ್ತು.
ಹಲ್ಲೆಗೊಳಗಾದ ಅನಿತಾ ಅವರ ಮೇಲೆ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಜುಲೈ 8ರಂದು ಪ್ರಕರಣ ಕೂಡ ದಾಖಲಾಗಿತ್ತು.
ಅರಣ್ಯ ಹಾಗೂ ಪರಿಸರ ವಿಚಾರಗಳಲ್ಲಿ ನ್ಯಾಯಾಲಯಕ್ಕೆ ಸಲಹೆ ನೀಡುವ ಅಮಿಕಸ್ ಕ್ಯೂರಿ ಎಡಿಎನ್ ರಾವ್ ಅವರು ಪ್ರಕರಣದ ತುರ್ತು ವಿಚಾರಣೆಗೆ ಕೋರಿದರು. ಮಹಿಳಾ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಅವರ ಮೇಲೆ ಪ್ರಕರಣ ದಾಖಲಿಸಿರುವುದನ್ನು ರಾವ್ ಕೋರ್ಟ್ ಗಮನಕ್ಕೆ ತಂದರು.