ಅಮರಾವತಿ: ಇಎಸ್ಐ ವೈದ್ಯಕೀಯ ಪರಿಕರಗಳ ಖರೀದಿ ಕುರಿತ ₹ 150 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಟಿಡಿಪಿ ಮುಖಂಡ ಕೆ.ಅತ್ಚನನಾಯ್ಡು ಮತ್ತು ಇತರೆ ಐವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
ಮಾಜಿ ಸಚಿವರನ್ನು ಶ್ರೀಕಾಕುಳಂನ ಅವರ ನಿವಾಸದಲ್ಲಿ ಬಂಧಿಸಲಾಯಿತು. ಇಎಸ್ಐನ ಮಾಜಿ ನಿರ್ದೇಶಕರಾದ ಸಿ.ರವಿ ಕುಮಾರ್, ಜಿ.ವಿಜಯಕುಮಾರ್, ರಾಜಮಹೇಂದ್ರವರಂ ಅವರನ್ನು ತಿರುಪತಿಯಲ್ಲಿ ಬಂಧಿಸಲಾಯಿತು ಎಂದು ಎಸಿಬಿ ಜಂಟಿ ನಿರ್ದೇಶಕ ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಎಸ್ಐ ಜಂಟಿ ನಿರ್ದೇಶಕ ಜನಾರ್ದನ್, ಸೂಪರಿಂಟೆಂಡೆಂಟ್ ಚಕ್ರವರ್ತಿ, ಹಿರಿಯ ಸಹಾಯಕನನ್ನು ವಿಜಯವಾಡದಲ್ಲಿ ಬಂಧಿಸಲಾಗಿದೆ. ಅತ್ಚನನಾಯ್ಡು ಅವರು ಹಿಂದಿನ ಟಿಡಿಪಿ ನೇತೃತ್ವದ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಅವಧಿಯಲ್ಲಿ ಖರೀದಿ ಅಕ್ರಮ ನಡೆದಿತ್ತು.
ಇಎಸ್ಐನಲ್ಲಿ 2014 ರಿಂದ 2019ರ ಅವಧಿಯಲ್ಲಿ ನಡೆದಿದ್ದ ಖರೀದಿ ವ್ಯವಹಾರಕ್ಕೆ ಸಂಬಂಧಿಸಿ ಎಸಿಬಿ ತನಿಖೆ ನಡೆಸಿತು. ಆಗ ₹ 150 ಕೋಟಿಯ ಖರೀದಿ ಅಕ್ರಮ ಬೆಳಕಿಗೆ ಬಂದಿದ್ದು, ಮಾಜಿ ಸಚಿವರು ಹಾಗೂ ಇತರರ ಪಾತ್ರ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಬಂಧಿಸಲಾಯಿತು ಎಂದು ಹೇಳಿದರು.