ಬೆಂಗಳೂರು: ‘ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ಇದು ದೇಶಕ್ಕೆ ಆಗುತ್ತಿರುವ ಅವಮಾನ. ಇದನ್ನು ತೀವ್ರವಾಗಿ ವಿರೋಧಿಸುವುದರ ಜೊತೆಗೆ ಹೆಣ್ಣುಮಕ್ಕಳನ್ನು ಗೌರವಿಸುವ ಸೂಕ್ಷ್ಮತೆಯನ್ನು ಮಕ್ಕಳಲ್ಲಿ ಬಳಸಬೇಕು’.
ಚಾಮರಾಜಪೇಟೆಯಲ್ಲಿ ಭಾನುವಾರ ಉದ್ಘಾಟನೆಗೊಂಡ ಶಾರದಾ ಸ್ತ್ರೀ ಸಮಾಜದ ಶತಮಾನೋತ್ಸವ ಭವನ ಕಾರ್ಯಕ್ರಮದಲ್ಲಿ ಪ್ರತಿಧ್ವನಿಸಿದ ಮಾತುಗಳಿವು. ಉದ್ಘಾಟನೆಯ ಅಂಗವಾಗಿ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿದ ಅರುಂಧತಿ ನಾಗ್, ಪ್ರತಿಭಾ ಪ್ರಹ್ಲಾದ್, ಸುಮಾ ಸುಧೀಂದ್ರ ಅವರನ್ನು ಸನ್ಮಾನಿಸಲಾಯಿತು.
‘ಮನುಕುಲದ ಮುನ್ನಡೆಗೆ ಧರ್ಮ, ರಾಜಕೀಯ ಎರಡೂ ಬೇಕು. ರಾಜಕೀಯ ಧರ್ಮದ ವ್ಯಾಪ್ತಿಯಲ್ಲಿದ್ದರೆ ತೊಂದರೆ ಇಲ್ಲ. ಆದರೆ, ಈಗ ಧರ್ಮದಲ್ಲಿ ರಾಜಕೀಯ ಮೇಲುಗೈ ಸಾಧಿಸಿದೆ. ಇದನ್ನು ಮೀರಿದಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ’ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.
‘ಹೆಣ್ಣುಮಕ್ಕಳು ಹೆಚ್ಚೆಚ್ಚು ಶಿಕ್ಷಣ ಪಡೆಯುತ್ತಿರುವುದು ಸ್ವಾಗತಾರ್ಹ. ಪ್ರಪಂಚದ ಮಾಹಿತಿಯನ್ನು ಅಂಗೈಯಲ್ಲಿ ಸಿಗುವ ಹಾಗೆ ವಿಜ್ಞಾನ ಮಾಡಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಹ್ಯಾಕಾಶ ವಿಜ್ಞಾನಿ ಎ.ಎಸ್.ಕಿರಣ್ ಕುಮಾರ್ ಸಲಹೆ ನೀಡಿದರು. 105 ವಸಂತ ಪೂರೈಸಿದ ಶಾರದಾ ಸ್ತ್ರೀ ಸಮಾಜದ ಸಾಧನೆಗಳನ್ನು ಶ್ಲಾಘಿಸಿದರು.