ಬೇತಿಯಾ(ಬಿಹಾರ): ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾದ 13ರ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, 30 ವರ್ಷದ ತಂದೆಯನ್ನು ಬಂಧಿಸಲಾಗಿದೆ.
ಮನೆಯಲ್ಲಿ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಮಝೌಲಿಯಾ ಪೊಲೀಸ್ ಠಾಣೆಯ ವ್ಯಾಪ್ತಿಯ ಗ್ರಾಮದಲ್ಲಿ ಈ ಪ್ರಕರಣ ನಡೆದಿದ್ದು, ಬಾಲಕಿಯ ತಾಯಿಯ ಹೇಳಿಕೆ ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ.
ತಂದೆಯಿಂದ ಲೈಂಗಿಕ ದೌರ್ಜನ್ಯ ನಡೆದ ಕುರಿತು ಬಾಲಕಿ ಹಾಗೂ ಆಕೆಯ ತಾಯಿಯ ಮನವಿ ಮೇರೆಗೆ ಕಳೆದ ವಾರ ಪಂಚಾಯ್ತಿ ಸಭೆ ನಡೆಸಲಾಗಿತ್ತು. ಸಭೆ ಬಳಿಕ ಮಾನಸಿಕವಾಗಿ ವಿಚಲಿತಳಾಗಿದ್ದ ಬಾಲಕಿ ಗ್ರಾಮದಿಂದ ಓಡಿಹೋಗಿದ್ದಳು. ಕುಟುಂಬದವರು ಆಕೆಯನ್ನು ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದರು ಎಂದು ಮೂಲಗಳು ತಿಳಿಸಿವೆ.
ರಾಯಪುರ: ಏಳು ವರ್ಷದ ಬಾಲಕಿ ಮೇಲೆ ಕಳೆದ ವಾರ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದಾರೆ. ಆದರೆ ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ.
ಬಾಲಕಿ ಹಾಗೂ ಶಾಲೆಯ ಮಹಿಳಾ ಸಿಬ್ಬಂದಿ ಜತೆ ಮಾತನಾಡಲಾಗಿದೆ ಎಂದು ಛತ್ತೀಸಗಡದ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಅಧ್ಯಕ್ಷೆ ತಿಳಿಸಿದ್ದು, ತನಿಖೆ ನಡೆಸಲು ತಂಡ ರಚಿಸುವುದಾಗಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ವರದಿ: ಪಶ್ಚಿಮ ಬಂಗಾಳದ ರಾಯಗಂಜ್ನ ಸರ್ಕಾರಿ ಶಾಲೆಯ ನಾಲ್ಕನೇ ತರಗತಿಯ ಇಬ್ಬರು ಬಾಲಕಿಯರ ಮೇಲೆ ಶಿಕ್ಷಕನೇ ಬಲಾತ್ಕಾರ ನಡೆಸಿ ಸಿಕ್ಕಿ ಬಿದ್ದಿದ್ದಾನೆ. ಶಾಲೆಯ ಅವಧಿ ಮುಗಿದ ಬಳಿಕ ತರಗತಿಯಲ್ಲಿಯೇ ಶಿಕ್ಷಕ ಇಬ್ಬರೂ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ಮಧ್ಯವಯಸ್ಕನಿಂದ ಕೃತ್ಯ
ಅಸ್ಸಾಂನ ತಿನಸುಕಿಯಾ ಜಿಲ್ಲೆಯ ಲಾಜೊಂಗ್ ಗ್ರಾಮದಲ್ಲಿ 55 ವರ್ಷದ ವ್ಯಕ್ತಿಯೊಬ್ಬ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಬಾಲಕಿಯ ತಂದೆ ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಪಕ್ಕದ ಮನೆಯ ಐನುಲ್ ಹಖ್ ಕೆಲವು ದಿನಗಳ ಹಿಂದೆ ನಮ್ಮ ಮಗಳನ್ನು ಮನೆಯಿಂದ ಹೊರಗೆ ಕರೆದು ಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಆದರೆ ಈ ಕುರಿತು ಪತ್ನಿ ಶುಕ್ರವಾರವಷ್ಟೆ ಹೇಳಿದ್ದು, ಬಳಿಕ ನೆರೆಮನೆಯವರಿಗೆ ಈ ವಿಷಯ ತಿಳಿಸಿದೆ. ನೆರೆಮನೆಯವರು ಹಖ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು’ ಎಂದು ಬಾಲಕಿ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆ ಸೇರಿ ಮೂವರ ಬಂಧನ
ಕೌಶಾಂಬಿ: 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಸಂಬಂಧ ಇಬ್ಬರು ಯುವಕರು ಹಾಗೂ ಒಬ್ಬ ಮಹಿಳೆಯನ್ನು ಬಂಧಿಸಲಾಗಿದೆ.
ಬಾಲಕಿಗೆ ಆಮಿಷ ತೋರಿಸಿದ ಮಹಿಳೆ, ಆಕೆಯನ್ನು ಯುವಕರ ಬಳಿಗೆ ಕರೆದೊಯ್ದಿದ್ದಾಳೆ. ಶುಕ್ರವಾರ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಕುಟುಂಬದವರು ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಬಬ್ಲೂ ಪ್ರಜಾಪತಿ ಹಾಗೂ ಭೈಯಾನ್ ಎಂದು, ಮಹಿಳೆಯನ್ನು ಸವಿತಾ ಪ್ರಜಾಪತಿ ಎಂದು ಗುರುತಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರತಾಪ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.